ADVERTISEMENT

ಅನ್‌ಲಾಕ್‌: ಕಾವೇರಿ ನದಿ ದಡದಲ್ಲಿ ಹೆಚ್ಚಿದ ಚಟುವಟಿಕೆ

ನದಿ ದಂಡೆಯಲ್ಲಿ ತ್ಯಾಜ್ಯದ ರಾಶಿ, ನೀರು ಮಲಿನವಾಗದಂತೆ ತಡೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 19:30 IST
Last Updated 6 ಅಕ್ಟೋಬರ್ 2020, 19:30 IST
ಕೊಳ್ಳೇಗಾಲ ತಾಲ್ಲೂಕಿನ ದಾಸನಪುರ ಗ್ರಾಮದ ಕಾವೇರಿ ನದಿಯ ತೀರದಲ್ಲಿ ಬಟ್ಟೆಗಳು ಹಾಗೂ ತ್ಯಾಜ್ಯಗಳು ಬಿದ್ದಿರುವುದು
ಕೊಳ್ಳೇಗಾಲ ತಾಲ್ಲೂಕಿನ ದಾಸನಪುರ ಗ್ರಾಮದ ಕಾವೇರಿ ನದಿಯ ತೀರದಲ್ಲಿ ಬಟ್ಟೆಗಳು ಹಾಗೂ ತ್ಯಾಜ್ಯಗಳು ಬಿದ್ದಿರುವುದು   

ಕೊಳ್ಳೇಗಾಲ: ಕೋವಿಡ್‌ ಹಾವಳಿಯಿಂದ ಹೇರಲಾಗಿದ್ದ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸಿದ ನಂತರ ತಾಲ್ಲೂಕಿನ ಕಾವೇರಿ ನದಿ ತೀರಗಳಲ್ಲಿ ಸ್ಥಳೀಯರು ಹಾಗೂ ಹೊರಗಿನವರ ಓಡಾಟ ಹೆಚ್ಚಾಗಿದ್ದು, ಪ್ಲಾಸ್ಟಿಕ್‌ ಸೇರಿದಂತೆ ಇತರೆ ತ್ಯಾಜ್ಯಗಳು ನಡಿ ದಂಡೆಯಲ್ಲಿ ರಾಶಿ ಬೀಳಲು ಆರಂಭಿಸಿವೆ.

ಲಾಕ್‌ಡೌನ್‌ ಅವಧಿಯಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಇತ್ತು. ಸ್ಥಳೀಯರು ಅಗತ್ಯಕ್ಕೆ ಮಾತ್ರ ನದಿಗೆ ತೆರಳುತ್ತಿದ್ದರು. ಆಗ ನದಿ ನೀರು ಶುಭ್ರವಾಗಿತ್ತು. ಅನ್‌ಲಾಕ್‌ ಆರಂಭವಾದ ನಂತರ ಜನರ ಚಟುವಟಿಕೆಗಳು ಹೆಚ್ಚಾಗಿವೆ. ನದಿ ದಂಡೆಯಲ್ಲಿ ಪ್ಲಾಸ್ಟಿಕ್‌, ಹಳೆಯ ಬಟ್ಟೆ, ಮದ್ಯದ ಬಾಟಲಿಗಳು ಕಾಣಸಿಗುತ್ತಿವೆ. ತ್ಯಾಜ್ಯಗಳು ನದಿ ಒಡಲು ಸೇರುತ್ತಿವೆ.

ಕಾವೇರಿ ನದಿಯಿಂದ ನೂರಾರು ಗ್ರಾಮಗಳು ಹಾಗೂ ನಗರ ಪ್ರದೇಶಗಳಿಗೆ ಪ್ರತಿನಿತ್ಯ ನೀರು ಪೂರೈಕೆ ಆಗುತ್ತದೆ. ಲಕ್ಷಾಂತರ ಮಂದಿ ಕೃಷಿಗಾಗಿ ನದಿ ನೀರನ್ನೇ ಅವಲಂಬಿಸಿದ್ದಾರೆ.

ADVERTISEMENT

‘ಲಾಕ್‌ಡೌನ್‌ ಸಂದರ್ಭದಲ್ಲಿ ನದಿ, ಜಲಪಾತಗಳು ಸೇರಿದಂತೆ ಪ್ರವಾಸಿ ತಾಣಗಳ ಭೇಟಿಗೆ ನಿರ್ಬಂಧ ಇತ್ತು. ನದಿ ತೀರಕ್ಕೆ ಯಾರೂ ಹೋಗುತ್ತಿರಲಿಲ್ಲ. ಈಗ ಯಾವುದಕ್ಕೂ ನಿಯಂತ್ರಣ ಇಲ್ಲದಿರುವುದರಿಂದ ನೀರನ್ನು ಮಲಿನ ಮಾಡುವ ಎಲ್ಲ ಚಟುವಟಿಕೆಗಳು ನಡೆಯುತ್ತಿವೆ’ ಎಂದು ಪರಿಸರ ಪ್ರೇಮಿ ಮಹೇಶ್‌ ಪಟೇಲ್‌ ಅವರು ಹೇಳಿದರು.

ನದಿ ದಂಡೆಯ ಗ್ರಾಮದ ಜನರು ನದಿ ನೀರಲ್ಲೇ ಜಾನುವಾರು, ಬಟ್ಟೆ ತೊಳೆಯುತ್ತಾರೆ. ಇದನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಇದಲ್ಲದೇ, ಅನೇಕರು ನದಿ ತೀರದಲ್ಲಿ ಶುಭ ಸಮಾರಂಭಗಳನ್ನು ಏರ್ಪಡಿಸಿ ಅಲ್ಲಿಯೇ ಅಡುಗೆ ಸಿದ್ಧಪಡಿಸುತ್ತಾರೆ. ಮಾಂಸ ಸೇರಿದಂತೆ ಅಡುಗೆಗೆ ಬೇಕಾದ ವಸ್ತುಗಳನ್ನು ನದಿ ನೀರಿನಲ್ಲೇ ತೊಳೆದು ಸ್ವಚ್ಛಗೊಳಿಸುತ್ತಾರೆ. ಊಟದ ನಂತರ ಉಳಿಕೆ ಆಹಾರ, ಬಾಲೆ ಎಳೆಗಳನ್ನೂ ನದಿಗೇ ಎಸೆಯುತ್ತಾರೆ. ಕೆಲವು ಸಂದರ್ಭದಲ್ಲಿ ಜನರಿಗೆ ಬಾಡೂಟದ ಜೊತೆಗೆ ಮದ್ಯವನ್ನೂ ಪೂರೈಸಲಾಗುತ್ತದೆ.

‘ಊಟ ಮಾಡಿದ ನಂತರ, ಮದ್ಯ ಸೇವಿಸಿದ ನಂತರ ಬಾಟಲಿಯನ್ನು ಅಲ್ಲೇ ಒಡೆಯಲಾಗುತ್ತಿದೆ. ವಾಮಾಚಾರದ ಚಟುವಟಿಕೆಗಳೂ ನಡೆಯುತ್ತವೆ. ತಾಲ್ಲೂಕು ಆಡಳಿತ ಇಂತಹದ್ದಕ್ಕೆಲ್ಲ ಕಡಿವಾಣ ಹಾಕಬೇಕು’ ಎಂದು ಹರಳೆ ಗ್ರಾಮದ ನಿವಾಸಿ ಗಣೇಶ್‌ ಅವರು ಒತ್ತಾಯಿಸಿದರು.

‘ಜನರು ಕಾವೇರಿ ನದಿಯನ್ನು ಕಲುಷಿತ ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶುದ್ಧ ನೀರಿಗಾಗಿ ಪರದಾಡಬೇಕಾದ ಸ್ಥಿತಿ ಬರಲಿದೆ’ ಎಂದುಕರ್ನಾಟಕ ವೈಲ್ಡ್ ಲೈಫ್ ಟ್ರಸ್ಟ್ ಕಾರ್ಯದರ್ಶಿಮನೋಜ್ ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.