ಸಂತೇಮರಹಳ್ಳಿ: ಸಮೀಪದ ಭೋಗಾಪುರ ಗ್ರಾಮದಿಂದ ಒಂದು ಕಿ.ಮೀ ದೂರದಲ್ಲಿರುವ ದೀಪಾ ಅಕಾಡೆಮಿಯ ಅಂಧ ಮಕ್ಕಳ ವಸತಿ ಶಾಲೆಯಲ್ಲಿರುವ ದೃಷ್ಟಿ ದೋಷ ಹೊಂದಿರುವ ಮಕ್ಕಳ ಪಾಲಿಗೆ ಚಂದ್ರಮ್ಮದಾರಿದೀಪವಾಗಿದ್ದಾರೆ. ಚಂದ್ರಮ್ಮ ಅವರಿಗೂ ಕಣ್ಣು ಕಾಣಿಸುವುದಿಲ್ಲ.
ಗುಂಡ್ಲುಪೇಟೆ ತಾಲ್ಲೂಕಿನ ಹೊಸಗುಳಿ ಗ್ರಾಮದ ಇವರು ಬ್ರೈಲ್ ಲಿಪಿ ಮೂಲಕ ಮಕ್ಕಳಿಗೆ ಅಕ್ಷರ ಕಲಿಸುವುದರ ಜತೆಗೆ ಸಂಗೀತಹಾಗೂ ಇನ್ನಿತರಪಠ್ಯೇತರ ಚಟುವಟಿಕೆಗಳನ್ನು ಕಲಿಸುತ್ತಿದ್ದಾರೆ.
ಆರು ವರ್ಷಗಳಿಂದ ಚಂದ್ರಮ್ಮ ಅವರು ಮಕ್ಕಳೊಂದಿಗೆ ಒಡನಾಡುತ್ತಿದ್ದಾರೆ. ಅವರ ಆರೈಕೆ ಮಾಡುತ್ತಿದ್ದಾರೆ. ಇವರ ಜೊತೆಗೆ ಸಾಯಿರಭಾನು, ಲತಾ ಮಣಿ ಹಾಗೂ ರಶ್ಮಿ ಎಂಬ ಮೂವರು ಭಾಗಶಃ ದೃಷ್ಟಿ ದೋಷ ಹೊಂದಿರುವವರು.
ಈ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದ್ದು, ಬಾಲಕ ಬಾಲಕಿಯರು ಸೇರಿದಂತೆ 30 ಮಕ್ಕಳಿದ್ದಾರೆ. ದೀಪಾ ಅಕಾಡೆಮಿಯು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ದೃಷ್ಟಿ ದೋಷ ಉಳ್ಳ ಮಕ್ಕಳನ್ನು ಕರೆದುಕೊಂಡು ಬಂದು ವಸತಿ ಶಾಲೆ ನಡೆಸುತ್ತಿದೆ.
ಚಂದ್ರಮ್ಮ ಅವರುಬ್ರೈಲ್ ಲಿಪಿಯ ಮೂಲಕ ಸ್ವಂತಿಕೆ ರೂಢಿಸಿದ್ದಾರೆ. ಓದುವುದು, ಬರೆಯುವುದರಿಂದ ಸ್ವತಂತ್ರವಾಗಿ ಓಡಾಡುವುದನ್ನು ಅಭ್ಯಾಸ ಮಾಡಿಸಿದ್ದಾರೆ. ಆರಂಭದಲ್ಲಿ ಮಕ್ಕಳು ತಮ್ಮ ಪೋಷಕರೊಂದಿಗೆವಸತಿ ಶಾಲೆಗೆ ಹಾಜರಾಗುತ್ತಿದ್ದರು. ಇದೀಗ ಇಲ್ಲಿ ತರಬೇತಿಯ ನಂತರ ಸ್ವತಃ ತಾವೇ ತಮ್ಮ ಗ್ರಾಮಗಳಿಗೆ ಕೇನ್ಸ್ಟಿಕ್ಬಳಸಿ ಹೋಗಿ ಬರುವಂತೆ ಅಭ್ಯಾಸ ಮಾಡಿಸಿದ್ದಾರೆ.
‘ಹಾರ್ಮೋನಿಯಂ ನುಡಿಸುವುದು, ತಬಲ ಬಾರಿಸುವುದರ ಜತೆಗೆ ಸಂಗೀತ ಹೇಳಿಕೊಡುತ್ತಿದ್ದಾರೆ. ಇಲ್ಲಿನ ಮಕ್ಕಳಿಗೆ ಸ್ವತಂತ್ರವಾಗಿ ಬದುಕುವ ಜೀವನ ಕೌಶಲಗಳನ್ನು ಶಿಕ್ಷಕಿಯರ ಮೂಲಕ ಕಲಿಸಲಾಗುತ್ತಿದೆ’ ಎಂದು ಮೇಲ್ವಿಚಾರಕಿ ಸುನಿತಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾನು ಒಬ್ಬಳು ಅಂಧ ವಿದ್ಯಾರ್ಥಿಯಾಗಿ ಕಲಿತು ಬೇರೆ ದೃಷ್ಟಿ ದೋಷ ಹೊಂದಿರುವ ಮಕ್ಕಳಿಗೆ ಕಲಿಸಲು ಖುಷಿಯಾಗುತ್ತಿದೆ.ಶಾಲೆಯಲ್ಲಿಕಲಿತ ಮಕ್ಕಳು ತಾಂತ್ರಿಕವಾಗಿ ಇತರರಂತೆ ಸ್ವತಂತ್ರವಾಗಿ ಓಡಾಡಬೇಕು ಎನ್ನುವ ಆಸೆ ಇದೆ. ಅದು ನನಸಾಗುತ್ತಿದೆ’ ಎಂದು ಚಂದ್ರಮ್ಮ ‘ಪ್ರಜಾವಾಣಿ’ಯೊಂದಿಗೆ ಮನದ ಮಾತು ಹಂಚಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.