ADVERTISEMENT

ಯಳಂದೂರು: ಬಿಸಿಲು ಮಾರಮ್ಮನ ಜಾತ್ರೋತ್ಸವ ವೈಭವ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 8:21 IST
Last Updated 3 ಮಾರ್ಚ್ 2026, 8:21 IST
ಬಿಸಿಲು ಮಾರಮ್ಮ ದೇವಿಗೆ ಅಲಂಕಾರ ಮಾಡಿರುವುದು
ಬಿಸಿಲು ಮಾರಮ್ಮ ದೇವಿಗೆ ಅಲಂಕಾರ ಮಾಡಿರುವುದು   

ಯಳಂದೂರು: ತಾಲ್ಲೂಕಿನ ಸಮೀಪದ ಗೂಳಿಪುರ ಗ್ರಾಮದಲ್ಲಿ ಬಿಸಿಲು ಮಾರಮ್ಮ ಜಾತ್ರೋತ್ಸವ ಸೋಮವಾರ ಅಪಾರ ಭಕ್ತರ ನಡುವೆ ಅದ್ದೂರಿಯಾಗಿ ಜರುಗಿತು.

ಸಾವಿರಾರು ಭಕ್ತರು ದೇವಿಗೆ ಹೂಹಾರ ಹಾಗೂ ತಂಬಿಟ್ಟಿನ ಆರತಿ ಸಮರ್ಪಿಸಿ ಭಕ್ತಿ ಮೆರೆದರು. ದೇವರ ಭಕ್ತರು ಮುಳ್ಳಿನ ಪೊದೆಗಳಿಗೆ ಹಾರಿ ಹರಕೆ ಸಲ್ಲಿಸಿದರು.

ಗೂಳಿಪುರ ಗ್ರಾಮದಲ್ಲಿ ಹಬ್ಬಕ್ಕೆ ಒಂದು ವಾರ ಮೊದಲೇ ಸಿದ್ಧತೆ ಕೈಗೊಳ್ಳಲಾಗಿತ್ತು. ಊರ ಹಬ್ಬ ಸೂಸೂತ್ರವಾಗಿ ನಡೆಯಲು ಭಾನುವಾರ ಸಂಜೆ ದೇವತೆಗೆ ಎಳೆನೀರು ಅಭಿಷೇಕ ನಡೆಯಿತು. ಸೋಮವಾರ ಮುಂಜಾನೆ ಬಿಸಿಲು ಮಾರಮ್ಮನಿಗೆ ವೈವಿಧ್ಯಮಯ ಪುಷ್ಪಗಳಿಂದ ಸಿಂಗರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ADVERTISEMENT

ಮಧ್ಯಾಹ್ನ ಊರಮಾರಿ ಭಕ್ತರು ಮಂಗಳವಾದ್ಯ ಮೊಳಗಿಸುತ್ತಿದ್ದಂತೆ, ಭಕ್ತರ ಮೇಲೆ ಮಾರಿಯರ ಗಣ (ಗುಂಪು) ಆವಾಹನೆಯಾಯಿತು. ನಗಾರಿ ಶಬ್ದ ಹೆಚ್ಚುತ್ತಿದ್ದಂತೆ ಭಕ್ತರು ದೇವಿಯ ಗುಣಗಾನ ಮಾಡಿದರು. ಭಕ್ತರು ಮುಳ್ಳಿನ ಪೊದೆಗಳ ಮೇಲೆ ಹಾರಿ ಹರಕೆ ತೀರಿಸಿದರು. ಈ ವೇಳೆ ಯುವಕರ ತಂಡ ಮುಳ್ಳಿನ ಪೊದೆಯಿಂದ ಮಾರಮ್ಮನ ಭಕ್ತರನ್ನು ಹೊರಗೆ ತಂದು ಹೂ, ಹೊಂಬಾಳೆ ನೀಡಿ ಮಳೆ ಬೆಳೆಗೆ ಪ್ರಾರ್ಥಿಸಿದರು.

ಎಳೆನೀರು, ಅಡಿಕೆ ಸಿಂಗಾರ ಪಡೆದು ಸಂಪ್ರೀತರಾದ ದೇವಿ ಆವಾಹನೆಯಾದವರು ದೇವಾಲಯಗಳತ್ತ ಸಾಗಿದರು. ಸತ್ತಿಗೆ ಸುರಿಪಾನಿ ಹೊತ್ತವರ ಜೊತೆ ದೇಗುಲವನ್ನು ಮೂರು ಬಾರಿ ಪ್ರದಕ್ಷಿಣೆ ಮಾಡಿ, ಭಕ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವರ್ಷ ಬಿಸಿಲು ಮತ್ತು ಮಳೆ ಸಮಸಮ ಆಗಲಿದೆ ಎಂದು ಮಂತ್ರಾಕ್ಷತೆಯ ಆಶೀರ್ವಚನ ನೀಡಿದರು. ನಂತರ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ತನುಮನದಿಂದ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ಹಣ್ಣು–ಕಾಯಿ ಸಮರ್ಪಿಸಿದರು. ಪ್ರಾರ್ಥನೆ ಸಲ್ಲಿಸಿದರು. ಮಹಿಳೆಯರು ಮತ್ತು ಮಕ್ಕಳು ಮಡೆ ಉತ್ಸವದಲ್ಲಿ ಪಾಲ್ಗೊಂಡು ‘ಉಘೇ ಮಾರಮ್ಮ’ ಉದ್ಘೋಷ ಮೊಳಗಿಸಿದರು. ಮೆರವಣಿಗೆ ಸಾಂಗವಾಗಿ ಸಾಗಿತು.

ಗುಡಿಯ ಸುತ್ತಲೂ ಹೂಗಳಿಂದ ಅಲಂಕರಿಸಲಾಗಿತ್ತು. ದೇವಿಗೆ ಆಭರಣಗಳ ಸಿಂಗಾರ ಮಾಡಲಾಗಿತ್ತು. ಹೆಣ್ಣು ಮಕ್ಕಳು ಜಾತ್ರೆ ನಡುವೆ ತಂಬಿಟ್ಟು ತಯಾರಿಸಿ, ಆರತಿ ಮಾಡಿ ದೈವ ಗಣಗಳಿಗೆ ನಮಿಸಿದರು. ಭಕ್ತರು ಕೊಂಬು ಕಹಳೆ ಊದುತ್ತ, ದೇವರ ಸತ್ತಿಗೆ ಹೊತ್ತು ಊರಿನತ್ತ ಸಾಗಿದರು. ರಾತ್ರಿ ಗ್ರಾಮದ ಬಡಾವಣೆಗಳಲ್ಲಿ ಮಾರಮ್ಮನ ಮೆರವಣಿಗೆ ವೈಭವದಿಂದ ಸಾಗಿತು.

‘ಯುಗಾದಿಗೆ ಹದಿನೈದು ದಿನಗಳ ಮೊದಲು ಹಬ್ಬ ನಡೆಯುತ್ತದೆ. ಮುಂಗಳವಾರ ಸಂಜೆ ಮಹೋತ್ಸವ ಕೊನೆಗೊಳ್ಳುತ್ತದೆ. ಈ ವೇಳೆ ಭಕ್ತರು ದೇವರಿಗೆ ವೀಳ್ಯದೆಲೆ, ಎಣ್ಣೆ, ಬೆಲ್ಲ ನೀಡಿ, ಕುಂಕುಮಾರ್ಚನೆ ನೆರವೇರಿಸುತ್ತಾರೆ. ನಾಯಕ ಸಮುದಾಯದ ಭಕ್ತರು ಮುಳ್ಳಿನ ಬೇಲಿಗಳಿಗೆ ಹಾರಿಕೊಂಡು ಹರಕೆ ಒಪ್ಪಿಸುವ ಪರಂಪರೆ ಅನಾದಿ ಕಾಲದಿಂದಲೂ ನಡೆದು ಬಂದಿದೆ’ ಎಂದು ಗ್ರಾಮಸ್ಥರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.