ADVERTISEMENT

ಯಳಂದೂರು: ಮಘಾ ಮಳೆಗೆ ಬೆಚ್ಚಿದ ಜನ

ಬಿಆರ್ಟಿ 3 ತಾಸು ಭರ್ಜರಿ ಮಳೆ: ಪಟ್ಟಣದ ಸಂತೆ ಪೇಟೆ ಆಯೋಮಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 15:31 IST
Last Updated 18 ಆಗಸ್ಟ್ 2024, 15:31 IST
ರಂಗನಾಥಸ್ವಾಮಿ ದೇವಳದಲ್ಲಿ ಭಾನುವಾರ ಹೆಚ್ಚಿನ ಸಂಖ್ಯೆಯ ಭಕ್ತರು ದಾಸೋಹದಲ್ಲಿ ಪಾಲ್ಗೊಂಡರು.
ರಂಗನಾಥಸ್ವಾಮಿ ದೇವಳದಲ್ಲಿ ಭಾನುವಾರ ಹೆಚ್ಚಿನ ಸಂಖ್ಯೆಯ ಭಕ್ತರು ದಾಸೋಹದಲ್ಲಿ ಪಾಲ್ಗೊಂಡರು.   

ಯಳಂದೂರು: ‘ಮಘಾ ಮಳೆ ಬಂದಷ್ಟು ಒಳ್ಳೇದು, ಮನೆ ಮಗ ಉಂಡಷ್ಟು ಒಳಿತು’ ಎಂಬ ಗಾದೆ ಮಾತು ಗ್ರಾಮೀಣರಲ್ಲಿ ಇದೆ. ಇದನ್ನು ನೆನಪಿಸುವಂತೆ ಭಾನುವಾರ ಪಟ್ಟಣ,  ಬಿಳಿಗಿರಿಬೆಟ್ಟ, ಸುತ್ತಲಿನ ಪ್ರದೇಶಗಳಲ್ಲಿ ಭರ್ಜರಿ ಮಳೆ ಸುರಿಯಿತು.

ತಾಲ್ಲೂಕಿನಲ್ಲಿ ಮುಂಜಾನೆ ಮೋಡ ಮುಸುಕಿದ ವಾತಾವರಣ ಇತ್ತು. ಇದೇ ವೇಳೆ ಹೆಚ್ಚಿನ ಧಗೆಯೂ ಬಾಧಿಸಿತ್ತು. ತುಂತುರು ಮಳೆ ಸುರಿಯಿತು. ಮಧ್ಯಾಹ್ನ ನಿರೀಕ್ಷೆಗೂ ಮೀರಿ ಬಿರುಸಿನ ಮಳೆ ಸುರಿದಿದೆ.

ಬಿಳಿಗಿರಿರಂಗಬೆಟ್ಟದಲ್ಲಿ  ಎರಡೂವರೆ ತಾಸು ವರ್ಷಧಾರೆ ಆಯಿತು. ಸೆಖೆಯಿಂದ ತತ್ತರಿಸಿದ್ದ ನಿವಾಸಿಗಳು ನಿಟ್ಟುಸಿರು ಬಿಟ್ಟರು. ಪ್ರವಾಸಿಗಳು ಮತ್ತು ಭಕ್ತರು ಒದ್ದೆಯಾಗದಂತೆ ದೇವಸ್ಥಾನದ ಸುತ್ತ ನಿಂತುಕೊಂಡರು. ತಡರಾತ್ರಿಯೂ ಸುರಿದಿತ್ತು.  ಕೆರೆ ಕಟ್ಟೆಗಳಿಗೆ ನೀರು ಹರಿದು ಬರುವ ನಿರೀಕ್ಷೆ ಇದೆ ಎಂದು ಬಂಗ್ಲೇಪೋಡು ಬೊಮ್ಮಯ್ಯ ಹೇಳಿದರು.

ADVERTISEMENT

 ಸಂತೆಯಲ್ಲಿ ಪರದಾಟ: 

ಪಟ್ಟಣದ ತಗ್ಗು ಪ್ರದೇಶದಲ್ಲಿ ನೀರು ನಿಂತು ಸಂಚರಿಸಲು ನಿವಾಸಿಗಳು ತ್ರಾಸಪಟ್ಟರು. ಯರಗಂಬಳ್ಳಿ-ಗುಂಬಳ್ಳಿ ಗ್ರಾಮಗಳ ರಸ್ತೆ ಹದಗೆಟ್ಟಿದ್ದು, ಸವಾರರು ತಗ್ಗು ರಸ್ತೆ ನಡುವೆ ಸಾಗಿದರು. ಭಾನುವಾರದ ಸಂತೆ ಮಳೆಗೆ ಸಿಲುಕಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರು ಪರದಾಡಿದರು.

ಮಾರಾಟಗಾರರು ತರಕಾರಿ, ಸೊಪ್ಪು ಮತ್ತಿತರ ವಸ್ತುಗಳನ್ನು ರಕ್ಷಿಸಿಕೊಳ್ಳಲು ಟೆಂಟ್‌ಗಳ ಮೊರೆ ಹೋದರು. ಮಳೆ ನಡುವೆ ಗ್ರಾಹಕರು ವಸ್ತುಗಳನ್ನು ಕೊಂಡರು. ಸಂತೆ ವ್ಯಾಪಾರಿಗಳು ಬಿಸಿಲು ಮತ್ತು ಮಳೆಯಿಂದ ರಕ್ಷಿಸಿಕೊಳ್ಳಲು ಶಾಶ್ವತ ಸೂರು ಮಾಡಿಕೊಡಬೇಕು ಎಂದು ವ್ಯಾಪಾರಿ ಮಹದೇವ ಒತ್ತಾಯಿಸಿದರು.

ಕೆಲವು ದಿನಗಳಿಂದ ಉಷ್ಣಾಂದಲ್ಲಿ ಏರಿಕೆಯಾಗಿದೆ. ಹಾಗಾಗ, ಸೋನೆ ಮಳೆ ಸುರಿದರೂ, ಶಾಖ ತಣಿದಿಲ್ಲ. ಬಿಸಿಲು, ಮೋಡದ ನಡುವೆ ದಗೆಯೂ ಹೆಚ್ಚಾಗುತ್ತಿದೆ. ಮಳೆ ಸುರಿಯುತ್ತಿದ್ದರೂ ಫ್ಯಾನ್ ಬಳಸಿ ಮಲಗುವ ಪರಿಸ್ಥಿತಿ ಇದೆ. ಕೂಲಿ ಕೆಲಸಗಾರರು ಪರಿತಪಿಸುವಂತೆ ಆಗಿದೆ ಎಂದು ಮಾಂಬಳ್ಳಿ ಶಾಂತಮೂರ್ತಿ ಹೇಳಿದರು.

ಬಿಳಿಗಿರಿಬೆಟ್ಟದ ಚೈನ್ಗೇಟ್ ಬಳಿ ಸವಾರರು ಮಳೆ ನಡುವೆ ಸಾಗಿದರು.
ಯಳಂದೂರು ಪಟ್ಟಣದ ಸಂತೆಪೇಟೆ ಭಾನುವಾರ ಸುರಿದ ಮಳೆಗೆ ವ್ಯಾಪಾರಿಗಳು ಪರಿತಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.