ADVERTISEMENT

ಅಸಮರ್ಪಕ ಕಾಮಗಾರಿ: ಖಂಡನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 7:18 IST
Last Updated 7 ಡಿಸೆಂಬರ್ 2013, 7:18 IST

ಬಾಗೇಪಲ್ಲಿ: ಪಟ್ಟಣದ 23 ವಾರ್ಡ್‌­ನಲ್ಲಿ ನಡೆಯುತ್ತಿರುವ ಅಸಮರ್ಪಕ ಒಳಚರಂಡಿ ಕಾಮಗಾರಿಯಿಂದ ಸುತ್ತ­ಮುತ್ತಲ ನಿವಾಸಿಗಳ ಸಂಚಾರಕ್ಕೆ ಹಾಗೂ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ ಎಂದು ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಲಿ ಅಧಿಕಾರಿಗಳಿಗೆ ಮಹಿಳೆಯರು ಹಾಗೂ ಸುತ್ತಮುತ್ತಲ ನಿವಾಸಿಗಳು ತರಾಟೆಗೆ ತೆಗೆದುಕೊಂಡರು.

ಪಟ್ಟಣದಲ್ಲಿ ಒಳಚರಂಡಿ ನಿರ್ಮಿಸಲೆಂದು ಗುತ್ತಿಗೆದಾರರು ರಸ್ತೆ ಮಧ್ಯದಲ್ಲಿ ಚೇಂಬರ್ ಮಾಡಲು ಬೃಹದಾಕಾರದ ಗುಂಡಿ ಅಗೆದು, ರಸ್ತೆಯುದ್ದಕ್ಕೂ ಕಾಲುವೆ ಮಾಡಿದ್ದಾರೆ. ಅಗೆದ ಮಣ್ಣು, ಜಲ್ಲಿ–ಕಲ್ಲುಗಳು ರಸ್ತೆ ಮಧ್ಯ ಹಾಕಲಾಗಿದೆ.

ಒಳಚರಂಡಿಗೆ ಪೈಪ್‌ ಹಾಗೂ ಚೇಂಬರ್ ಅಳವಡಿಸಿದ ನಂತರ ತೆಗೆದ ಮಣ್ಣನ್ನು ಸಮರ್ಪಕವಾಗಿ ವಿಲೇವಾರಿ ಮಾಡಿಲ್ಲ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಕಾಮಗಾರಿ ವೇಳೆ ಕೆಲವು ಕಡೆ ಕುಡಿಯುವ ನೀರಿನ ಪೈಪ್ ಹಾಗೂ ಪಿಟ್‌ಗಳಿಗೆ ಧಕ್ಕೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

‘ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್ ಒಡೆದಿರುವ ಕಾರಣ ಕಳೆದ 15 ದಿನದಿಂದ ನೀರಿಗೆ ತೊಂದರೆಯಾಗಿದೆ. ರಸ್ತೆ ಅಗೆದಿರುವುದರಿಂದ ಟ್ಯಾಂಕರ್‌ಗಳೂ ಬರಲು ಸಾಧ್ಯವಾಗಿಲ್ಲ’ ಎಂದು ಶೋಭಾ ಮತ್ತು ಕಿಶೋರ್ ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.