ADVERTISEMENT

ಉದ್ಯೋಗ ಸೃಷ್ಟಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 5:55 IST
Last Updated 9 ಮಾರ್ಚ್ 2012, 5:55 IST

ಬಾಗೇಪಲ್ಲಿ: ಪ್ರಸಕ್ತ ಬಜೆಟ್‌ನಲ್ಲಿ ಉದ್ಯೋಗ ಸೃಷ್ಠಿ ಹಾಗೂ ನಿರುದ್ಯೋಗ ಭತ್ಯೆಗೆ ಹೆಚ್ಚು ಹಣ ಮೀಸಲಿಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಾ.15ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಎನ್.ಎಲ್.ಭರತ್‌ರಾಜ್ ಬುಧವಾರ ಇಲ್ಲಿ ತಿಳಿಸಿದರು.

ರಾಜ್ಯದ ವಿವಿಧ ಇಲಾಖೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.  ಪ್ರಾಥಮಿಕ ಶಿಕ್ಷಣದಲ್ಲಿ 38,518, ವೈದ್ಯ ಶಿಕ್ಷಣ ಇಲಾಖೆಯಲ್ಲಿ 20,143, ಪೊಲೀಸ್ ಇಲಾಖೆ- 16,950, ನಿಗಮ ಮಂಡಳಿ-13, 309, ಸಮಾಜ ಕಲ್ಯಾಣ-10,546, ನ್ಯಾಯಾಂಗ- 7,516, ಕಂದಾಯ-6,108, ತಾಂತ್ರಿಕ- 6601, ತೋಟಗಾರಿಕೆ-7636, ಪಶು ಸಂಗೋಪನೆ-5364, ಆರೋಗ್ಯ-23,088 ಹುದ್ದೆಗಳು ಖಾಲಿ ಇವೆ. ಇವುಗಳನ್ನು ನೇಮಕಕ್ಕೆ ಕೂಡಲೇ ರಾಜ್ಯ ಸರ್ಕಾರ ಮುಂದಾಗುವಂತೆ ಭರತ್‌ರಾಜ್ ಗೋಷ್ಠಿಯಲ್ಲಿ ಹೇಳಿದರು.

ಖಾಲಿ ಇರುವ ಐದು ಸಾವಿರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಉದ್ಯೋಗ ನೇಮಕಾತಿ ಮೇಲಿನ ಕೆಲವು ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಬೇಕು. ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಹೊರಗುತ್ತಿಗೆ ರದ್ದಾ ಗಬೇಕು. ಲೋಕಾಯುಕ್ತ ವರದಿ ಅನುಷ್ಠಾನ ಗೊಳಿಸಬೇಕು.
ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಬೇಕು.

ಗ್ರಾಮೀಣ ಭಾಗದ ಅಸಂಘಟಿತ ವಲಯದ ಕಾರ್ಮಿಕರಿಗೆ  ಕನಿಷ್ಠ ಆರು ಸಾವಿರ, ನಗರ ಪ್ರದೇಶಗಳಲ್ಲಿ ಹತ್ತು ಸಾವಿರ ಕನಿಷ್ಠ ವೇತನ ನಿಗದಿಗೊಳಿಸಬೇಕು. ಇದರ ಜತೆಯಲ್ಲಿ ನಿರುದ್ಯೋಗ ಭತ್ಯೆ ನೀಡಲು ಯೋಜನೆ ರೂಪಿಸಿ ಬಜೆಟ್‌ನಲ್ಲಿ ಹಣ ಮೀಸಲೀಡಬೇಕು ಎಂದು ಹೇಳಿದರು.

  ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಚನ್ನರಾಯಪ್ಪ, ಕಾರ್ಯದರ್ಶಿ ಎಂ.ಪಿ.ಮುನಿ ವೆಂಕಟಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ರಘುರಾಮರೆಡ್ಡಿ,  ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ, ಗೌರಿಬಿದನೂರು ತಾಲ್ಲೂಕು ಘಟಕದ ಅಧ್ಯಕ್ಷ ರವಿಚಂದ್ರರೆಡ್ಡಿ, ಚಿಂತಾಮಣಿ ಘಟಕದ ಅಧ್ಯಕ್ಷ ಕೃಷ್ಣಾರೆಡ್ಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.