ADVERTISEMENT

ಕುಂದಲಗುರ್ಕಿಯ ಕಲಾ ಶಾಲೆ

ಡಿ.ಜಿ.ಮಲ್ಲಿಕಾರ್ಜುನ
Published 7 ಅಕ್ಟೋಬರ್ 2012, 8:15 IST
Last Updated 7 ಅಕ್ಟೋಬರ್ 2012, 8:15 IST

`ಕಲ್ಲು ಒಂದು ಪರಿಪೂರ್ಣ ಸೃಷ್ಟಿ. ತನಗೆ ತಾನೇ ಸಮಾನ. ತನ್ನ ಮಿತಿಗಳ ಜ್ಞಾನ...~ 
-ಇದು ಪೋಲಿಷ್ ಕವಿ ಸ್ಬಿಗ್ನೂ ಹರ್ಬರ್ತ್‌ನ ಮಾತು. ತಾಲ್ಲೂಕಿನ ಕುಂದಲಗುರ್ಕಿಯ ಚಿತ್ರ ವಿಚಿತ್ರ ಆಕಾರದ ಬಂಡೆಗಳನ್ನು ಕಂಡಾಗ ಮನಸ್ಸಿನಲ್ಲಿ ಈ ಸಾಲು ತಾನಾಗೇ ಮೂಡುತ್ತದೆ.  

 ಇಲ್ಲಿನ ಬೆಟ್ಟ ಗುಡ್ಡಗಳಲ್ಲಿನ ಕಲ್ಲುಗಳು ಬರೀ ಕಲ್ಲಾಗಿರದೆ ಅದರದೇ ರೂಪ, ಸ್ವರೂಪ ಹೊಂದಿದ್ದು ನೋಡುಗರಲ್ಲಿ ಕುತೂಹಲ ಹುಟ್ಟಿಸುತ್ತವೆ. ಸೂಕ್ಷ್ಮ ಮನಸ್ಸುಗಳನ್ನು ತನ್ನತ್ತ ಸೆಳೆಯುವ ಪ್ರಯತ್ನವನ್ನೂ ಮಾಡುತ್ತವೆ.

 ಹೆಡೆ ಸುತ್ತಿ ಮಲಗಿರುವ ಸರ್ಪ, ವೆಂಕಟೇಶ್ವರನ ಮೂರು ನಾಮ, ಬೇಟೆ ಹಿಡಿದ ನಂತರ ಇನ್ನೇನು ತಿನ್ನಲು ಬಾಯ್ತೆರೆದಿರುವ ತಿಮಿಂಗಲ, ಮಲಗಿರುವ ಮಗು, ಲಗೋರಿ ಆಡಲು ಜೋಡಿಸಿಟ್ಟ ಕಲ್ಲುಗಳು... ಹೀಗೆ ನಮ್ಮ ಭಾವನೆಗಳ ವೈಶಾಲ್ಯತೆಗೆ ತಕ್ಕಂತೆ ಕಣ್ಣಿಗೆ ಗೋಚರಿಸು ವಿವಿಧ ಆಕಾರಗಳಲ್ಲಿ ಗೋಚರಿಸುತ್ತವೆ.

 ಸಹಸ್ರಾರು ವರ್ಷಗಳಿಂದ ಗಾಳಿ, ಬಿಸಿಲು, ಮಳೆ ಎದುರಿಸಿ ನಿಂತಿರುವ ಕಲ್ಲುಗಳು ಆಕಾರ, ರೂಪಗಳಿಂದ ಎಂಥ ಕಲ್ಲು ಹೃಯದವರನ್ನೂ ಕವಿಗಳನ್ನಾಗಿಸುತ್ತದೆ. ಪ್ರಕೃತಿಯ ಈ ಕಲಾಶಾಲೆಯಲ್ಲಿ ಮನಸ್ಸಿನಲ್ಲಿ ಮೂಡುವ ಆಕಾರಗಳು ನೋಡುಗರನ್ನು ಕಲಾವಿದರನಾಗೂ ಮಾಡುತ್ತದೆ.

ಕುಂದಲಗುರ್ಕಿ ಬೆಟ್ಟ- ಗುಡ್ಡಗಳು ಸುಮಾರು ದೂರವಿದೆ. ಇಲ್ಲಿನ ಕೆಲ ಬಂಡೆಗಳನ್ನು ಯಾರೋ ಕಲಾವಿದರು ತಂದು ಇಟ್ಟಂತೆ, ಹಲವಾರು ರೂಪಗಳಲ್ಲಿ ಗೋಚರಿಸುತ್ತವೆ. ಇವು ಇಲ್ಲಿ ನಿಂತ ಬಗೆಯನ್ನು ಕೆಲವೊಮ್ಮೆ ಯೋಚಿಸಿದರೆ ಅಚ್ಚರಿಯಾಗುತ್ತದೆ. ಸೌಂದರ್ಯವು ನೋಡುಗರ ಕಣ್ಣಲ್ಲಿದೆ ಎಂಬ ಮಾತಿನಂತೆ ಕಲ್ಲು ಕೂಡ ಕಣ್ಣಿಗೆ ಸೌಂದರ್ಯದ ಖನಿಗಳಾಗಿ, ಚಿತ್ರ ವಿಚಿತ್ರ ರೂಪಗಳಿಂದ ಕಂಡುಬರುತ್ತವೆ ಮತ್ತು ಮನಸ್ಸಿಗೆ ಸಂತಸವನ್ನೂ ತರುತ್ತದೆ ಎನ್ನುತ್ತಾರೆ ಕುಂದಲಗುರ್ಕಿಯ ವೆಂಕಟೇಶ್.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.