ADVERTISEMENT

ಕುಡಿಯುವ ನೀರು ಪೂರೈಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಮೇ 2014, 10:14 IST
Last Updated 30 ಮೇ 2014, 10:14 IST
ಚಿಂತಾಮಣಿಯ ತಪತೇಶ್ವರ ಕಾಲೊನಿ ಮತ್ತು ವಿನಾಯಕ ನಗರದಲ್ಲಿ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಸ್ಥಳೀಯರು ಗುರುವಾರ ರಸ್ತೆ ತಡೆ ನಡೆಸಿದರು.
ಚಿಂತಾಮಣಿಯ ತಪತೇಶ್ವರ ಕಾಲೊನಿ ಮತ್ತು ವಿನಾಯಕ ನಗರದಲ್ಲಿ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಸ್ಥಳೀಯರು ಗುರುವಾರ ರಸ್ತೆ ತಡೆ ನಡೆಸಿದರು.   

ಚಿಂತಾಮಣಿ:  ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸುವಂತೆ ಒತ್ತಾಯಿಸಿ ನಗರದ ತಪತೇಶ್ವರ ಕಾಲೊನಿ ಮತ್ತು ವಿನಾಯಕ ನಗರದ ಸ್ಥಳೀಯರು ಗುರುವಾರ ರಸ್ತೆ ತಡೆ ನಡೆಸಿದರು.

ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರು ಇಲ್ಲದೆ ತಪತೇಶ್ವರ ಕಾಲೊನಿ ಮತ್ತು ವಿನಾಯಕ ನಗರದ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಅನೇಕ ಬಾರಿ ಮನವಿಗಳನ್ನು ನೀಡಿದ್ದರೂ ಪ್ರಯೋ­­ಜನವಾಗಿಲ್ಲ. ಪ್ರತಿಭಟನೆ ನಡೆಸಿದಾಗ ಕೇವಲ ಭರವಸೆಗಳನ್ನು ನೀಡುತ್ತಾರೆ ಎಂದು ಪ್ರತಿಭಟನಾ­ಕಾರರು ಆಕ್ರೋಶದಿಂದ ಹೇಳಿದರು.

ಮಹಿಳೆಯರು ಸೇರಿದಂತೆ ನೂರಾರು ಜನರು ಶ್ರೀನಿ­ವಾಸಪುರ ಮತ್ತು ಕೋಲಾರಕ್ಕೆ ಹೋಗುವ ರಸ್ತೆಯಲ್ಲೇ ಬಿಂದಿಗೆಗಳೊಂದಿಗೆ ಕುಳಿತು ಘೋಷಣೆ ಕೂಗಿದರು.

‘ಬಹುತೇಕ ದಲಿತರು ಮತ್ತು ಅಲ್ಪಸಂಖ್ಯಾತರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ ಎಂಬುದು ಮಾಯವಾಗಿದೆ. ಅಧಿ­ಕಾರಿಗಳು, ನಗರಸಭೆ ಸದಸ್ಯರು ಗಮನ ಹರಿ­ಸುತ್ತಿಲ್ಲ’ ಎಂದು ಪ್ರತಿಭಟನಾಕಾರರು ಟೀಕಿಸಿದರು.

ರಸ್ತೆ ತಡೆಯಿಂದ ಸಂಚಾರಕ್ಕೆ ಅಡ್ಡಿಯುಂಟಾ­ಗಿತ್ತು. ಪೊಲೀಸ್‌ ಇನ್ಸ್‌ಪೆಕ್ಟರ್‌ ನಂಜಪ್ಪ ಸ್ಥಳಕ್ಕೆ ಆಗ­ಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆ­ಸಿದರು. ನಗರಸಭೆಯ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಕೇಳುವುದು ಸೂಕ್ತ, ರಸ್ತೆ ತಡೆ ನಡೆಸಿ ಜನರಿಗೆ ತೊಂದರೆ ಕೊಡು­ವುದು ಸರಿ­ಯಲ್ಲ ಎಂದು ಮನವಿ ಮಾಡಿದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರತಿಭಟನಾ­ಕಾರರು, ನಗರಸಭೆ ಎದುರು ಹಲ ಬಾರಿ ಪ್ರತಿಭಟನೆ ನಡೆಸ­ಲಾಗಿದೆ, ಮೌಖಿಕ, ಲಿಖಿತವಾಗಿ ಸಂಬಂಧಪಟ್ಟ ಅಧಿ­ಕಾರಿಗಳಿಗೆ ಮನವಿ­ಗಳನ್ನು ಸಲ್ಲಿಸಲಾಗಿದೆ. ಅದಕ್ಕೂ ಸ್ಪಂದಿಸದ ಕಾರಣ ರಸ್ತೆ ತಡೆ ನಡೆ­ಸುತ್ತಿರುವುದಾಗಿ ಪೊಲೀಸರಿಗೆ ಹೇಳಿದರು.

ನಗರಸಭೆ ಸದಸ್ಯ ಆರ್‌.ಪ್ರಕಾಶ್‌, ಅಧಿಕಾರಿ­ಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ­ಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು. ವಿಷಯ ಇಷ್ಟೊಂದು ತೀವ್ರವಾಗಿರು­ವುದು ಗಮನಕ್ಕೆ ಬಂದಿ­ರಲಿಲ್ಲ. ನಾಳೆಯಿಂದಲೇ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸುವುದಾಗಿ ಎಂದು ಹೇಳಿದ ನಂತರ ಪ್ರತಿಭಟನೆ ಹಿಂಪ­ಡೆ­ಯಲಾಯಿತು. 

ಪ್ರತಿಭಟನೆಯಲ್ಲಿ ಸ್ಥಳೀಯರಾದ ಮಂಗಮ್ಮ, ವಿಜಯನರಸಿಂಹ, ಗಂಗಾಧರ, ಮರಿಯಮ್ಮ, ಮುನಿಯಪ್ಪ, ಪ್ರಕಾಶ್‌, ನಾಗಮ್ಮ, ರಮೇಶ್‌, ಮಾರಪ್ಪ, ಪದ್ಮಾವತಿ, ಯರ್ರಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.