ಗೌರಿಬಿದನೂರು: ಭೀಕರ ಬರಗಾಲ ಮತ್ತು ಇತರ ಕಾರಣಗಳಿಂದಾಗಿ ಕೆಲ ಕುರಿಗಳು ಸಾವನ್ನಪ್ಪುತ್ತಿದ್ದರೆ, ಇನ್ನೂ ಕೆಲ ಮೇಕೆಗಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಕೃಷಿಯನ್ನು ಬಿಟ್ಟು ಕುರಿ ಸಾಕಾಣಿಕೆಯನ್ನೇ ಅವಲಂಬಿಸಿದ್ದ ಬಹುತೇಕ ಮಂದಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರ್ಕಾರ ಕೂಡಲೇ ಕಾರ್ಯಪ್ರವೃತ್ತಗೊಂಡು ಕುರಿ ಸಾಕಾಣಿಕೆದಾರರ ಸಮಸ್ಯೆ ಯನ್ನು ಪರಿಹರಿಸದಿದ್ದಲ್ಲಿ, ಗಂಭೀರ ಪರಿಸ್ಥಿತಿಗೆ ತುತ್ತಾಗ ಬೇಕಾಗುತ್ತದೆ ಎಂದು ತಾಲ್ಲೂಕು ಮೇಕೆ ಮತ್ತು ಕುರಿ ಸಾಕಾಣಿಕೆದಾರರ ಸಂಘದ ಅಧ್ಯಕ್ಷ ನಂಜೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
`ಕೆಲ ತಿಂಗಳು ಹಿಂದೆಯಷ್ಟೇ ನಬಾರ್ಡ್ ಮತ್ತು ಸರ್ಕಾರ ಕುರಿ ಸಾಕಾಣಿಕೆಯನ್ನು ಉಪಕಸುಬನ್ನಾಗಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದವು. ಆರ್ಥಿಕ ನೆರವನ್ನೂ ಸಹ ನೀಡಲಾಗಿತ್ತು. ಆದರೆ ಈಗಿನ ಬರಗಾಲದಲ್ಲಿ ನೀರಿಲ್ಲದೇ ಮತ್ತು ಪೌಷ್ಟಿಕ ಆಹಾರವೂ ಇಲ್ಲದೇ ಕುರಿ ಮತ್ತು ಮೇಕೆಗಳು ಅಪೌಷ್ಟಿಕತೆಗೆ ತುತ್ತಾಗುತ್ತಿವೆ.
ಏನೂ ಇಲ್ಲದೇ ನಿತ್ರಾಣಗೊಳ್ಳುವ ಕುರಿ ಮತ್ತು ಮೇಕೆಗಳು ಸಾವನ್ನಪ್ಪುತ್ತಿವೆ. ಕುರಿಗಳು ಹೀಗೆ ಸಾವನ್ನಪ್ಪುತ್ತಿದ್ದರೆ, ಕುರಿ ಮತ್ತು ಮೇಕೆ ಸಾಕಾಣಿಕೆ ಕಸುಬನ್ನು ಮುಂದುವರೆಸುವುದು ಹೇಗೆ~ ಎಂದು ಅವರು ಪ್ರಶ್ನಿಸಿದ್ದಾರೆ.
`ಬರಗಾಲ ಮತ್ತು ಬೇರೆ ಬೇರೆ ಕಾರಣಗಳಿಂದ ಕುರಿ ಸಾಕಾಣಿಕೆ ಫಾರ್ಮಗಳನ್ನು ಮುಚ್ಚಲಾಗುತ್ತಿದೆ. ಆರ್ಥಿಕ ನಷ್ಟಕ್ಕೆ ತುತ್ತಾಗುತ್ತಿರುವ ರೈತರು ದಿಕ್ಕು ತೋಚದೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಯಲ್ಲಿದ್ದಾರೆ.
ಕುರಿ ಸಾಕಾಣಿಕೆ ದಾರರ ಸ್ಥಿತಿಯನ್ನರಿತು ಬ್ಯಾಂಕುಗಳು ಅವರ ಸಾಲ ಮನ್ನಾ ಮಾಡಬೇಕು~ ಎಂದು ಸಂಘದ ಕಾರ್ಯದರ್ಶಿ ನವೀನ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.