ADVERTISEMENT

ಗುಡಿಸಲು ಮುಕ್ತ ಕ್ಷೇತ್ರಕ್ಕೆ ಪಣ: ಶಾಸಕ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 10:25 IST
Last Updated 17 ಜುಲೈ 2012, 10:25 IST

ಚಿಂತಾಮಣಿ: ಗುಡಿಸಲು ಮುಕ್ತ ವಿಧಾನಸಭಾ ಕ್ಷೇತ್ರ ರೂಪಿಸಲು ಪಣತೊಟ್ಟು ಅರ್ಹ ಫಲಾನುಭವಿಗಳಿಗೆ ವಸತಿ ಕಲ್ಪಿಸಿಕೊಡಲು ಕಳೆದ ಒಂದೂವರೆ ವರ್ಷದಿಂದ ಯತ್ನಿಸುತ್ತಿದ್ದರೂ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮರ್ಪಕ ಪಟ್ಟಿ ನೀಡುವುದರಲ್ಲಿ ವಿಫಲರಾಗಿದ್ದಾರೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ಇಲ್ಲಿ ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ವತಿಯಿಂದ ಪಟ್ಟಣದ ನಗರಸಭೆ ಸಭಾಂಗಣದಲ್ಲಿ  ಈಚೆಗೆ ಹಮ್ಮಿಕೊಂಡಿದ್ದ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ 2011-12ನೇ ಸಾಲಿನಲ್ಲಿ 3 ಸಾವಿರ ಮನೆಗಳನ್ನು ನೀಡಲು ಅವಕಾಶವಿದೆ. ಆದರೆ 4 ಸಾವಿರಕ್ಕೂ ಹೆಚ್ಚು ಜನ ಪಟ್ಟಿಯಲ್ಲಿದ್ದಾರೆ.

ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿದರು. ಜುಲೈ ತಿಂಗಳ 20 ರಂದು ಅಂತಿಮ ಪಟ್ಟಿಯನ್ನು ಆಯ್ಕೆ ಮಾಡಲಾಗುವುದು. ಗುಡಿಸಲು, ಹೆಂಚು ಮತ್ತು ಶೀಟಿನ ಮನೆಗಳಿಗೆ ಪ್ರಥಮ ಆದ್ಯತೆ ನೀಡಿ, ಪರಿಗಣನೆಗೆ ತೆಗೆದುಕೊಳ್ಳಬೇಕು. ನಂತರ ಜಂತಿಗೆ ಮತ್ತು ಹಳೆ ಮನೆಗಳ ಪಟ್ಟಿಯನ್ನು ಪರಿಗಣಿಸಿ, ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್.ಸುಬ್ರಾಯನಾಯಕ್, ಜಿ.ಪಂ. ಸದಸ್ಯ ಎಸ್.ಎನ್.ಚಿನ್ನಪ್ಪ, ವೀಣಾ ಗಂಗುಲಪ್ಪ, ತಾ.ಪಂ ಅಧ್ಯಕ್ಷ ಕೋಡಿಗಲ್ ರೆಡ್ಡೆಪ್ಪ, ಉಪಾಧ್ಯಕ್ಷೆ ಪದ್ಮಮ್ಮ, ಸದಸ್ಯರಾದ ಹಾದಿಗೆರೆ ಚೌಡರೆಡ್ಡಿ, ಸ್ಕೂಲ್ ಸುಬ್ಬಾರೆಡ್ಡಿ, ಸುಬ್ರಮಣ್ಯಂ, ಶೇಖರ್‌ಬಾಬು, ಸುಲ್ತಾನ ಷರೀಫ್, ಕೃಷ್ಣಪ್ಪ, ನಾಗರಾಜ್, ಸುಜಾತ ಹಾಗೂ ಇನ್ನಿತರರು ಜಾಗೃತಿ ಸಮಿತಿ ಸಭೆಯಲ್ಲಿ ಉಪಸ್ಥಿತರಿದ್ದರು.

ಗ್ರಾಮದಲ್ಲಿ ಜ್ವರ ಬಾಧೆ
ಶ್ರೀನಿವಾಸಪುರ:
ಗುಡ್ಡಗಾಡು ಪರಿಸರದಲ್ಲಿನ 50 ಮನೆಗಳ ಒಂದು ಪುಟ್ಟ ಗ್ರಾಮ ಭೀಮಗುಂಟಪಲ್ಲಿ. ಗ್ರಾಮದ ಸುತ್ತ ಮುತ್ತ ಕಲ್ಲು ಗುಡ್ಡಗಳ ನಡುವೆ ಬೆಳೆದು ನಿಂತ ಗಿಡಮರ. ಈ ಗ್ರಾಮವನ್ನು ಕಳೆದ ಒಂದು ತಿಂಗಳಿಂದ ಜ್ವರ ಬಾಧೆ ಕಾಡುತ್ತಿದೆ. ಅದು ನಾಗರಿಕ ಬದುಕನ್ನು ಅಸಹನೀಯಗೊಳಿಸಿದೆ.

ಗ್ರಾಮಸ್ಥರು ಹೇಳುವಂತೆ ಗ್ರಾಮದ ಪ್ರತಿ ಮನೆಯಲ್ಲೂ ಜ್ವರ ಪೀಡಿತರಿದ್ದಾರೆ. ಗ್ರಾಮದ ಸುಮಾರು 250 ಜನ ಸಂಖ್ಯೆಯ ಪೈಕಿ ಅರ್ಧದಷ್ಟು ಜನ ಜ್ವರದಲ್ಲಿ ಬಿದ್ದು ಎದ್ದಿದ್ದಾರೆ. ಅದೇನು ಜ್ವರವೋ ಏನೊ, ಕೀಲು ನೋವು ಬರುತ್ತದೆ. ತಲೆನೋವು ಕಾಡುತ್ತದೆ, ಬಾಯಿ ಕಹಿಯಾಗಿ ಊಟ ಮಾಡಲು ಬಿಡುವುದಿಲ್ಲ. ಸುಸ್ತಿನಿಂದ ನಡೆಯುಲು ಆಗುವುದಿಲ್ಲ ಎಂದು ಜ್ವರ ಪೀಡಿತರಾಗಿದ್ದ ಗ್ರಾಮದ ಮಹಿಳೆ ಲಕ್ಷ್ಮಮ್ಮ ಬಳಲಿ ಹೇಳುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.