ಚಿಕ್ಕಬಳ್ಳಾಪುರ: ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷರ ಕೊಠಡಿಯನ್ನು ಕಾಂಗ್ರೆಸ್ ಮುಖಂಡರು ದುರ್ಬಳಕೆ ಮಾಡಿ ಕೊಂಡು ಹುಟ್ಟುಹಬ್ಬ ಆಚರಿಸಿಕೊಳ್ಳುವ ಜತೆಗೆ ಅಲ್ಲಿಯೇ ಮದ್ಯಪಾನ ಮಾಡಿ ದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ತಾಲ್ಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ತಾಲ್ಲೂಕು ಪಂಚಾಯಿತಿ ವರೆಗೆ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರು ಶಾಸಕರು, ಕಾಂಗ್ರೆಸ್ ಮುಖಂಡರು ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಕಾನೂನು ಬಾಹಿರವಾಗಿ ಸರ್ಕಾರಿ ಕಚೇರಿಯನ್ನು ದುರುಪಯೋಗ ಮಾಡಿಕೊಂಡವರ ವಿರುದ್ಧ ಪ್ರಕರಣ ದಾಖಲಿಸುವ ಜತೆಗೆ ಕರ್ತವ್ಯಲೋಪ ಎಸಗಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ (ಇಒ) ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ‘ರಜೆ ದಿನವಾದ ಭಾನುವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಕೊಠಡಿಯನ್ನು ಕಾಂಗ್ರೆಸ್ ಮುಖಂಡರು ಮೋಜಿನ ಕೂಟಕ್ಕಾಗಿ ಬಳಸಿಕೊಂಡಿದ್ದು ನೋಡಿದರೆ ಜಿಲ್ಲೆಯಲ್ಲಿ ಜಿಲ್ಲಾಡಳಿತ ಇದೆಯಾ ಎಂಬ ಸಂಶಯ ಮೂಡುತ್ತಿದೆ.
ಈ ಘಟನೆ ನಡೆದು ಎರಡು ದಿನ ಕಳೆದರೂ ಜಿಲ್ಲಾಡಳಿತ ಈವರೆಗೆ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಕ್ಷೇತ್ರದಲ್ಲಿ ಶಾಸಕರು ಮತ್ತು ಅವರ ಅನುಯಾಯಿಗಳ ದುರಾಡಳಿತ ಮಿತಿಮೀರಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಅಧ್ಯಕ್ಷರ ಕೊಠಡಿಯಲ್ಲಿ ಯುವ ಕಾಂಗ್ರೆಸ್ ಮುಖಂಡ ಎಸ್.ಪಿ. ಶ್ರೀನಿವಾಸ್, ಎಪಿಎಂಸಿ ಉಪಾಧ್ಯಕ್ಷ ವೆಂಕಟಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ತಿರುಮಳಪ್ಪ, ಮುನಿಕೃಷ್ಣಪ್ಪ, ಜೆಸಿಬಿ ಮಂಜು ಪಾರ್ಟಿ ಆಯೋಜಿಸಿ ಮದ್ಯಪಾನ ಮಾಡಿರುವುದು ಅಧಿಕಾರಿ ಗಳಿಗೆ, ಜಿಲ್ಲಾಡಳಿತ ಮತ್ತು ಶಾಸಕರಿಗೆ ನಾಚಿಕೆಗೇಡಿನ ಸಂಗತಿ’ ಎಂದರು.
‘ಇಒ ಮತ್ತು ಅಧ್ಯಕ್ಷ ಈ ಪೈಕಿ ಭಾನು ವಾರ ಕಚೇರಿಯಲ್ಲಿ ಪಾರ್ಟಿ ಮಾಡಲು ಯಾರು ಅನುಮತಿ ಕೊಟ್ಟರು? ಒಂ ದೊಮ್ಮೆ ಇವರು ಅನುಮತಿ ಕೊಟ್ಟಿದ್ದರೆ ಅವರು ಐಪಿಸಿ ಸೆಕ್ಷನ್ 403, 404, 407, 409ರ ಪ್ರಕಾರ ಶಿಕ್ಷೆಗೆ ಅರ್ಹ ರಾಗುತ್ತಾರೆ. ಇವರ ಅನುಮತಿ ಇಲ್ಲದೆ ಕಚೇರಿ ಪ್ರವೇಶಿಸಿದ್ದರೆ ಪಾರ್ಟಿ ಮಾಡಿದವರ ವಿರುದ್ಧ ಜಿಲ್ಲಾಡಳಿತ ಐಪಿಸಿ ಸೆಕ್ಷನ್ 441, 457, 449ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಪಂಚಾಯತ್ ರಾಜ್ ಇಲಾಖೆ ಕಾರ್ಯ ದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಐಜಿಪಿ, ಎಸ್ಪಿ ಅವರಿಗೆ ದೂರು ಸಲ್ಲಿಸುತ್ತೇವೆ’ ಎಂದರು.
ಬಿಜೆಪಿ ಮುಖಂಡ ಭೈರೇಗೌಡ ಮಾತನಾಡಿ, ‘ಜಿಲ್ಲೆ ಬರಪೀಡಿತವಾಗಿ ಜಾನುವಾರುಗಳು ನೀರು, ಮೇವಿಲ್ಲದೆ ಸಾಯುವ ಸ್ಥಿತಿಗೆ ತಲುಪುತ್ತಿವೆ. ಇಂತಹ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷರ ಕೊಠಡಿಯನ್ನು ಶಾಸಕರ ಅನುಯಾ ಯಿಗಳು ಬಾರ್ ರೀತಿ ಬಳಸಿಕೊಳ್ಳುವ ಮೂಲಕ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.
ಪ್ರತಿಭಟನಾಕಾರರು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರಿಗೆ ಮನವಿ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ವಿ.ಸುಬ್ಬರಾಜು, ಪ್ರಧಾನ ಕಾರ್ಯದರ್ಶಿ ಕಲಾ ನಾಗರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್, ನಗರ ಘಟಕದ ಅಧ್ಯಕ್ಷ ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಒಬಿಸಿ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನರಸಪ್ಪ, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಲಲಿತಾ ಭೂಷಣ್, ರೈತ ಮೊರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಇಬ್ರಾಹಿಂ, ಮುರುಳಿ ಮೋಹನ್, ಶ್ರೀನಿವಾಸ್ ಗೌಡ, ಲಕ್ಷ್ಮಿನಾರಾಯಣ ಗುಪ್ತಾ, ಮುನಿರಾಜು, ಸುರೇಶ್, ಲಕ್ಷ್ಮಿಪತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.