ADVERTISEMENT

ನೂಲು ಬಿಚ್ಚುವವರ ಸಹಕಾರ ಸಂಘದ ಚುನಾವಣೆ ಮುಂದೂಡಿದೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 10:53 IST
Last Updated 8 ಮಾರ್ಚ್ 2018, 10:53 IST
ಶಿಡ್ಲಘಟ್ಟದ ಪ್ರಗತಿಪರ ನೂಲು ಬಿಚ್ಚುವವರ ಕೈಗಾರಿಕಾ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಸುವ ವೇಳೆ ಅಡ್ಡಿಪಡಿಸಿದ ಎರಡೂ ಗುಂಪಿನ ಸದಸ್ಯರೊಂದಿಗೆ ಅಧಿಕಾರಿಗಳು ಚರ್ಚಿಸಿದರು
ಶಿಡ್ಲಘಟ್ಟದ ಪ್ರಗತಿಪರ ನೂಲು ಬಿಚ್ಚುವವರ ಕೈಗಾರಿಕಾ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಸುವ ವೇಳೆ ಅಡ್ಡಿಪಡಿಸಿದ ಎರಡೂ ಗುಂಪಿನ ಸದಸ್ಯರೊಂದಿಗೆ ಅಧಿಕಾರಿಗಳು ಚರ್ಚಿಸಿದರು   

ಶಿಡ್ಲಘಟ್ಟ: ಮಾರ್ಚ್ 11ರಂದು ನಡೆಯಬೇಕಿದ್ದ ನಗರದ ಪ್ರಗತಿಪರ ನೂಲು ಬಿಚ್ಚುವವರ ಕೈಗಾರಿಕಾ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಕಾರಣಾಂತರದಿಂದ ಮುಂದೂಡಲಾಗಿದೆ.

ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿದ್ದ ಸಹಕಾರ ಸಂಘವನ್ನು ಮತ್ತೆ ಸ್ಥಾಪಿಸುವ ಉದ್ದೇಶದಿಂದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕಾರಿಗಳೂ ಸೇರಿದಂತೆ ಸಹಕಾರ ಸಂಘದ ಕೆಲ ಷೇರುದಾರರು ನೂತನ ಆಡಳಿತ ಮಂಡಳಿ ಸದಸ್ಯರ ಆಯ್ಕೆ ಮಾಡಲು ಚುನಾವಣೆ ನಡೆಸಲು ತೀರ್ಮಾನಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ವೇಳಾಪಟ್ಟಿ ರಚಿಸಿ ಅದರಂತೆ ಮಾರ್ಚ್‌ 5ರಂದು ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ದಿನಾಂಕ ನಿಗದಿಪಡಿಸಲಾಗಿತ್ತು.

ನಾಮಪತ್ರ ಸಲ್ಲಿಸಲು ಕೆಲವರು ಮುಂದಾದಾಗ ಷೇರುದಾರರಿಗೆ ಮಾಹಿತಿ ನೀಡದೆ ಚುನಾವಣೆ ದಿನ ನಿಗದಿಪಡಿಸಲಾಗಿದೆ ಎಂದು ಆರೋಪಿಸಿದ್ದರು. ನಿಯಮದಂತೆ ಒಂದು ದಿನ ನಾಮಪತ್ರ ಸಲ್ಲಿಸಲು ಅವಕಾಶವಿತ್ತು. ಆದರೆ, ಮಾ. 6ರಂದು ಕೆಲವರು ನಾಮಪತ್ರ ಸಲ್ಲಿಸಿದ್ದರು.

ADVERTISEMENT

ಅರ್ಹ ಅಭ್ಯರ್ಥಿಗಳ ಅಂತಮ ಪಟ್ಟಿ, ಅಭ್ಯರ್ಥಿಗಳಿಗೆ ಚುನಾವಣೆ ಚಿಹ್ನೆ ನೀಡಲು ಸಹಕಾರ ಸಂಘದ ಕಚೇರಿಯಲ್ಲಿ ಅಧಿಕಾರಿಗಳು ಸೇರಿದಾಗ ಒಂದು ಗುಂಪಿನವರು ಅರ್ಹ ಅಭ್ಯರ್ಥಿಗಳ ಆಕ್ಷೇಪ ವ್ಯಕ್ತಪಡಿಸಿದರು. ಅಂತಿಮ ಪಟ್ಟಿ ತಯಾರಿಸುವ ಮುನ್ನ ಷೇರುದಾರರ ಖಾತೆ ಪುಸ್ತಕದಲ್ಲಿ ನಾಲ್ಕು ನಕಲಿ ಷೇರುದಾರರ ಹೆಸರಿರುವ ಅನುಮಾನವಿದೆ. ಹೆಸರು ಪರಿಶೀಲಿಸಬೇಕು ಎಂದು ಪಟ್ಟು ಹಿಡಿದರು.

ಮತ್ತೊಂದು ಗುಂಪಿನ ಸದಸ್ಯರು ಹಾಲಿ ಇರುವ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಿ ಇಲ್ಲವಾದಲ್ಲಿ ಚುನಾವಣೆ ಮುಂದೂಡಿ ಎಂದು ಪಟ್ಟು ಹಿಡಿಯುವ ಮೂಲಕ ಪರಸ್ಪರ ಮಾತಿಗೆ ಮಾತು ಬೆಳೆದಾಗ ಅಧಿಕಾರಿಗಳು ಸುಮ್ಮನಾದರು. ನಂತರ ಎರಡೂ ಗುಂಪಿನ ಮುಖಂಡರೊಂದಿಗೆ ಚರ್ಚಿಸಿ ಸದ್ಯಕ್ಕೆ ಚುನಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಎಲ್ಲ ಪ್ರಕ್ರಿಯೆಗಳ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಅವರ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ಹೊರಟರು.

ಚುನಾವಣಾಧಿಕಾರಿ ಎಚ್.ಓಬಳೇಶ್, ನಗರಸಭೆ ಮಾಜಿ ಅಧ್ಯಕ್ಷ ಅಪ್ಸರ್‌ಪಾಷಾ, ಮುಖಂಡರಾದ ಕದಿರಿ ಯೂಸುಫ್, ಬಾಂಬ್ ಸಮೀ, ಸಯ್ಯದ್, ಆದಿಲ್‌ಪಾಷಾ, ಲಕ್ಷ್ಮಿನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.