ADVERTISEMENT

ಬಿಜೆಪಿಯಲ್ಲಿ ಸ್ವಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:20 IST
Last Updated 1 ಅಕ್ಟೋಬರ್ 2012, 6:20 IST

ಚಿಕ್ಕಬಳ್ಳಾಪುರ: `ಬಿಜೆಪಿಯಲ್ಲಿ ಎಲ್ಲವೂ ಬದಲಾಗಿದ್ದು, ಪಕ್ಷದಲ್ಲಿ ಸ್ವಾರ್ಥಿಗಳು ಮತ್ತು ಲೂಟಿಕೋರರೆ ತುಂಬಿಕೊಂಡಿದ್ದಾರೆ. ಆರ್‌ಎಸ್‌ಎಸ್ ತತ್ವ ಮತ್ತು ಸಿದ್ಧಾಂತಗಳಿಂದ ಕೂಡಿದ್ದ ಪಕ್ಷವು ಈಗ ಎಲ್ಲವನ್ನೂ ಕಳೆದುಕೊಂಡು, ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ~ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ.ಮುಮ್ತಾಜ್ ಅಲಿ ಖಾನ್ ತಿಳಿಸಿದರು.

`ಬಿಜೆಪಿಯು ಈಗ ಮೊದಲಿನಂತೆ ಉಳಿದಿಲ್ಲ. ತತ್ವ ಮತ್ತು ಸಿದ್ಧಾಂತಗಳ ಬದ್ಧತೆಯಿಂದ ದೂರಗೊಂಡಿರುವ ಪಕ್ಷದಲ್ಲಿ ಈಗ ಪ್ರಾಮಾಣಿಕರಿಗೆ ನೆಲೆಯಿಲ್ಲದಂತಾಗಿದೆ. ಸಂಪತ್ತು ಲೂಟಿ ಮಾಡಿರುವವರೇ ತುಂಬಿರುವಾಗ ಮೊದಲಿನಂತೆ ಉಳಿದುಕೊಳ್ಳಲು ಹೇಗೆ ಸಾಧ್ಯ~ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಅನ್ಯಾಯ ಮಾಡಲಾಗಿದೆ. ಪ್ರಮುಖ ಸ್ಥಾನ ನೀಡುವುದಾಗಿ ಹೇಳಿದ್ದ ಕೇಂದ್ರದ ವರಿಷ್ಠರು ತಮ್ಮ ಮಾತಿನಿಂದ ನುಣುಚಿಕೊಂಡಿದ್ದಾರೆ. ಯಡಿಯೂರಪ್ಪ ಅವರಿಗೆ ಅಪಮಾನ ಮಾಡಿದ್ದಾರೆ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

`ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಯಡಿಯೂರಪ್ಪ ಅವರಿಗೆ ಆಗಿರುವ ಅನ್ಯಾಯದಿಂದ ತುಂಬ ಬೇಸರವಾಗಿದೆ. ಯಡಿಯೂರಪ್ಪ ಅವರು ಪ್ರಯಾಣಿಸುವ ದೋಣಿಯಲ್ಲಿ ಇರುತ್ತೇನೆ. ಅದು ಪ್ರಯಾಣ ಮುಂದುವರಿಸಿದರೂ ಅಥವಾ ಮುಳುಗಿದರೂ ಅವರೊಂದಿಗೆ ಇರುತ್ತೇನೆ~ ಎಂದು ಅವರು ತಿಳಿಸಿದರು.

`ಯಡಿಯೂರಪ್ಪ ಅವರು ಬಿಜೆಪಿಯನ್ನು ಬಿಡುತ್ತಿಲ್ಲ. ಆದರೆ ಪಕ್ಷದ ವರಿಷ್ಠರೇ ಪಕ್ಷ ಬಿಡುವಂತಹ ಪರಿಸ್ಥಿತಿ ನಿರ್ಮಿಸಿದ್ದಾರೆ. ಅವರು ಜೆಡಿಎಸ್ ಅಥವಾ ಕಾಂಗ್ರೆಸ್‌ಗೆ ಹೋಗಬಹುದು. ಇಲ್ಲದಿದ್ದರೆ ಅವರೇ ಸ್ವಂತ ಪಕ್ಷ ಆರಂಭಿಸಬಹುದು. ಏನೇ ಮಾಡಿದರೂ ಮತ್ತು ಯಾವುದೇ ನಿರ್ಣಯ ಕೈಗೊಂಡರೂ ಅವರೊಂದಿಗೆ ಇರುತ್ತೇನೆ.

ನಾನೊಬ್ಬನೇ ಅಲ್ಲ, ಇಡೀ ಮುಸ್ಲಿಂ ಸಮುದಾಯವು ಯಡಿಯೂರಪ್ಪ ಜೊತೆ ಇರುತ್ತದೆ~ ಎಂದು ಪ್ರೊ. ಮುಮ್ತಾಜ್ ಅಲಿ ಖಾನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.