ADVERTISEMENT

ಮದಲೂರು ಕೆರೆ ಕಾಮಗಾರಿಗೆ ಭೂ ಸ್ವಾಧೀನ

ಜಯಚಂದ್ರ ಇಲ್ಲದೆ ಸಹಿ ಹಾಕಲ್ಲ ಎಂದು ಸಭೆಯಿಂದ ಹೊರ ನಡೆದ ರೈತರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 5:59 IST
Last Updated 18 ಜೂನ್ 2013, 5:59 IST

ಶಿರಾ: ಮದಲೂರು ಕೆರೆಗೆ ಕುಡಿಯುವ ನೀರು ಹರಿಸುವ ಮಹತ್ವಾಕಾಂಕ್ಷೆಯ ಕಾಮಗಾರಿಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಪ್ರತಿ ಎಕರೆಗೆ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಹಣ ಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದರೂ; ಅದಕ್ಕೆ ಒಪ್ಪದ ರೈತರು ಸಚಿವರು ಇನ್ನೂ ಹೆಚ್ಚಿನ ಹಣ ಕೊಡಿಸುವ ಭರವಸೆ ನೀಡಿದ್ದಾರೆ ಎಂದೇಳಿ ಸಭೆಯಿಂದ ಹೊರ ನಡೆದ ಪ್ರಸಂಗ ಸೋಮವಾರ ನಡೆಯಿತು.

ನಗರದ ಅಂಬೇಡ್ಕರ್ ಭವನದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಉಪವಿಭಾಗಾಧಿಕಾರಿ ಅನಿತಾ, ತಹಶೀಲ್ದಾರ್ ಕುಲಕರ್ಣಿ ಸಮ್ಮುಖ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು, ಸರ್ಕಾರ ತೀರ್ಮಾನಿಸಿದ್ದಕ್ಕಿಂತ ಹೆಚ್ಚು ಹಣ ಕೊಡಿಸುವ ಭರವಸೆ ನೀಡಿದ್ದ ಶಾಸಕರು ಈ ಸಭೆಯಲ್ಲಿರಬೇಕಿತ್ತು. ಆಗ ಇನ್ನೂ ಹೆಚ್ಚಿನ ಪರಿಹಾರ ಕೊಡಿಸುತ್ತಿದ್ದರು. ಅವರನ್ನು ಕೇಳದೆ ನಾವು ಸಹಿ ಹಾಕುವುದಿಲ್ಲ ಎಂದು ಸಭೆಯಿಂದ ಹೊರ ನಡೆದರು.

ಮತ್ತೆ ಕೆಲ ರೈತರು ಸರ್ಕಾರ ತಿಳುವಳಿಕೆ ಪತ್ರ ನೀಡುವ ಮೊದಲೇ ಜಮೀನುಗಳನ್ನು ಬಿಟ್ಟುಕೊಟ್ಟಿದ್ದು, ಒಂದಕ್ಕೆ ಹತ್ತರಷ್ಟು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಹೇಮಾವತಿ ನಾಲೆಗೆ ಸ್ವಾಧೀನಪಡಿಸಿಕೊಳ್ಳಲಾಗಿರುವ ಜಮೀನುಗಳ ರೈತರ ಭೂಮಿಗೆ ಸರ್ಕಾರಿ ಬೆಲೆಯ ನಾಲ್ಕರಷ್ಟು ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಫಲಾನುಭವಿಗಳ ಒಪ್ಪಂದದ ಅವಾರ್ಡ್ ಸಭೆ ಇದಾಗಿದೆ ಎಂದು ಉಪವಿಭಾಗಾಧಿಕಾರಿ ಅನಿತಾ ಸಭೆಗೆ ತಿಳಿಸಿದರು.

ರೈತರಿಗೆ ತಿಳಿವಳಿಕೆ ನೀಡುವ ಮೂಲಕ ಅವರ ಅಭಿಪ್ರಾಯ, ಆಕ್ಷೇಪ ಸಂಗ್ರಹಿಸಿ ಭೂಸ್ವಾದೀನ ಪ್ರಕ್ರಿಯೆ ವಿಧಾನ ಪೂರ್ಣಗೊಳಿಸಲಾಗುವುದು. ಸರ್ಕಾರದಲ್ಲಿ ಎಲ್ಲ ರೈತರ ದಾಖಲೆಗಳಿದ್ದು, ಅವುಗಳ ಅನ್ವಯ ಪರಿಹಾರ ನೀಡಲಾಗುವುದು. ಭೂ ಅಳತೆಗೆ ಸಂಬಂಧಿಸಿದ ತಕರಾರುಗಳಿದ್ದರೆ ರೈತರ ಬಳಿ ಇರುವ ದಾಖಲೆಗಳನ್ನು ಕಚೇರಿಗೆ ನೀಡಿ ವ್ಯತ್ಯಾಸ ಸರಿದೂಗಿಸಲು ಅವಕಾಶ ಇದೆ ಎಂದು ತಿಳಿಸಿದರು.

ಎಕರೆಗೆ ಮಾರುಕಟ್ಟೆಯ ಬೆಲೆ 1ಲಕ್ಷ ರೂಪಾಯಿ ಇದ್ದರೆ ಸರ್ಕಾರ 4 ಲಕ್ಷದವರೆಗೆ ಚೆಕ್ ಮೂಲಕ ಪರಿಹಾರ ನೀಡಲಿದೆ. ಅಲ್ಲದೆ ಜಮೀನಿನಲ್ಲಿ ಕಳೆದುಕೊಂಡ ಮರ, ಕೊಳವೆಬಾವಿ ಮೊದಲಾದವುಗಳಿಗೆ ಪ್ರತ್ಯೇಕ ಬೆಲೆ ನಿಗದಿಪಡಿಸಲಾಗುವುದು ಎಂದರು.

ನಮ್ಮ ಜಮೀನಿನಲ್ಲೂ ನಾಲೆ ಹಾದು ಹೋಗಿದ್ದು ಅಧಿಕಾರಿಗಳು ನಮ್ಮ ಹೆಸರು ಕೈ ಬಿಟ್ಟಿದ್ದಾರೆ. ನಾವು ಏನು ಮಾಡಬೇಕು ಎಂದು ರೈತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ರೀತಿಯಾಗಿದ್ದಲ್ಲಿ ಹೊಸದಾಗಿ 4 (1),  6 (1) ಪ್ರಕಟಿಸಿ ನಿಮ್ಮ ಜಮೀನಿಗೂ ಪರಿಹಾರ ನೀಡಲಿದ್ದೇವೆ. ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಸಮಾಧಾನಗೊಳಿಸಿದರು.

ಉಪನೋಂದಣಾಧಿಕಾರಿ ಸರೋಜಾ, ಹೇಮಾವತಿ ನಾಲಾ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಲಕ್ಷ್ಮೀಕಾಂತ್, ತಾಲ್ಲೂಕು ಪಂಚಾಯಿತಿ ಸದಸ್ಯ ತಿಮ್ಮಪ್ಪ ಮತ್ತಿತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.