ADVERTISEMENT

ಮುಕ್ತ ವಿಶ್ವವಿದ್ಯಾಲಯ ಮುಚ್ಚದಿರಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 6:06 IST
Last Updated 14 ಅಕ್ಟೋಬರ್ 2017, 6:06 IST

ಚಿಂತಾಮಣಿ: ’ಯುಜಿಸಿಯಿಂದ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ನೀಡಬೇಕು. ಜತೆಗೆ ಯಾವುದೇ ಕಾರಣಕ್ಕೂ ಮುಕ್ತ ವಿಶ್ವವಿದ್ಯಾಲಯವನ್ನು ಮುಚ್ಚಬಾರದು ಎಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಯುಜಿಸಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಕೆಲ ಕಾಲ ಧರಣಿ ನಡೆಸಿದರು.

ಎಬಿವಿಪಿ ಜಿಲ್ಲಾ ಘಟಕದ ಸಂಚಾಲಕ ಸುರೇಶ್‌ ಮಾತನಾಡಿ, ‘ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ 1996ರಲ್ಲಿ ಸ್ವತಂತ್ರ ಆಸ್ತಿತ್ವ ಪಡೆಯಿತು. ಅದಕ್ಕೂ ಮೊದಲು ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿ ಕಾರ್ಯನಿರ್ವಹಿಸುತಿತ್ತು’ ಎಂದು ತಿಳಿಸಿದರು.

ADVERTISEMENT

ಬಡತನದ ಕಾರಣದಿಂದ ಜೀವನ ನಿರ್ವಹಣೆಗೆ ಉದ್ಯೋಗ ಮಾಡಬೇಕಾದ ಅನಿವಾರ್ಯದಿಂದ ಲಕ್ಷಾಂತರ ಮಂದಿ ಪ್ರತಿಭಾವಂತರು ಸಾಮಾನ್ಯ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಲಾಗದೆ ನಿಲ್ಲಿಸುತ್ತಿದ್ದರು. ಅಂತಹ ವಿದ್ಯಾರ್ಥಿಗಳ ಕನಸು ನನಸು ಮಾಡುವ ಸಲುವಾಗಿ ಮುಕ್ತ ವಿಶ್ವವಿದ್ಯಾಲಯ ಆಸ್ತಿತ್ವಕ್ಕೆ
ಬಂದಿತು. ಕಾಲೇಜುಗಳಿಗೆ ಹೋಗಿ ವ್ಯಾಸಂಗ ಮಾಡಲಾರದ ಬಡವರಿಗೆ ವರದಾನವಾಗಿತ್ತು ಎಂದರು.

ಲಕ್ಷಾಂತರ ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ವಿಶ್ವ ವಿದ್ಯಾಲಯಕ್ಕೆ ಯುಜಿಸಿ ಮಾನ್ಯತೆ ನೀಡದಿರುವುದು ಖಂಡನೀಯ. ವಿಶ್ವವಿದ್ಯಾಲಯ, ರಾಜ್ಯ ಸರ್ಕಾರ ಅನೇಕ ಬಾರಿ ಮನವಿ ಸಲ್ಲಿಸಿದರೂ ಕಿವಿಗೊಡದಿರುವ ಯುಜಿಸಿಯ ಸರ್ವಾಧಿಕಾರ ಧೋರಣೆಯ ವಿರುದ್ಧ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ವಿದ್ಯಾರ್ಥಿ ಮುಖಂಡರಾದ ಭರತ್‌, ಕುಮಾರ್‌, ನಾಗೇಂದ್ರಗಂಗರಾಜ, ಅಶೋಕ, ಹರೀಶ್‌, ಮಧುಕುಮಾರ್‌, ಮಂಜು, ನಂದಕುಮಾರ್‌, ಪ್ರವೀಣ್‌ಕುಮಾರ್‌, ಲಕ್ಷ್ಮಣ್‌, ಜಾನ್ಸನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.