ADVERTISEMENT

ಸರ್ಕಾರಿ ಯೋಜನೆ ಸದ್ಬಳಕೆಗೆ ಕರೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2011, 6:05 IST
Last Updated 15 ಏಪ್ರಿಲ್ 2011, 6:05 IST
ಸರ್ಕಾರಿ ಯೋಜನೆ ಸದ್ಬಳಕೆಗೆ ಕರೆ
ಸರ್ಕಾರಿ ಯೋಜನೆ ಸದ್ಬಳಕೆಗೆ ಕರೆ   

ಬಾಗೇಪಲ್ಲಿ: ತಾಲ್ಲೂಕಿನ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭಿವೃದ್ಧಿಗಾಗಿ ಮೂರು ವರ್ಷಗಳಲ್ಲಿ 24 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಶಾಸಕ ಎನ್.ಸಂಪಂಗಿ ತಿಳಿಸಿದರು. 

ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ  ಜನ್ಮದಿನಾಚರಣೆ ಪ್ರಯುಕ್ತ ಬಾಗೇಪಲ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಅಂಬೇಡ್ಕರ್ ಮತ್ತು ಜಗಜೀವನರಾಂ ಅವರ ಆಶಯದಂತೆ ಎಲ್ಲಾ ಶೋಷಿತ ವರ್ಗಗಳ ಜನರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ’ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಗ್ರಾಮೀಣ ಜನರಿಗೆ ತಿಳಿಸಬೇಕಿದೆ. ಯೋಜನೆ ಸದ್ಬಳಕೆಗೆ ಸಂಬಂಧಿಸಿದಂತೆ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಿದೆ. ಇದರಿಂದ ಮಾತ್ರ ಸರ್ಕಾರಿ ಯೋಜನೆಗಳು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತವೆ ಎಂದು ತಿಳಿಸಿದರು.

ಜಾನಪದ ಕಲಾವಿದ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ‘ಅಂಬೇಡ್ಕರ್ ದಲಿತ ಜನಾಂಗಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಎಲ್ಲಾ ಶೋಷಿತ, ಕೃಷಿ ಕೂಲಿಕಾರ್ಮಿಕ ವರ್ಗಗಳ ಪರ ಹೋರಾಡಿದ ಅವರು ಸಾಮಾಜಿಕ ಜಾಗೃತಿ ಮೂಡಿಸಲು ಯತ್ನಿಸಿದವರು. ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಶೋಷಣೆ, ದೌರ್ಜನ್ಯ ತಡೆಗಟ್ಟಬೇಕಿದೆ. ಎಲ್ಲ ಜಾತಿ-ಧರ್ಮದವರು ಸಮಾನರು ಎಂಬ ಭಾವನೆಯಲ್ಲಿ ಎಲ್ಲರೂ ಸೌಹಾರ್ದದಿಂದ ಬಾಳುವ ವಾತಾವರಣ ರೂಪಿಸಬೇಕಿದೆ’ ಎಂದರು.
ತಾಲ್ಲೂಕಿನ ವಿವಿಧ ಇಲಾಖೆಗಳ ವತಿಯಿಂದ ಅರ್ಹ ಪಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಜಾನಪದ ಕಲಾವಿದರಾದ ಗೊಲ್ಲಹಳ್ಳಿ ಶಿವಪ್ರಸಾದ್, ಪಿಚ್ಚಳ್ಳಿ ಶ್ರೀನಿವಾಸ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮುನಿಯಮ್ಮ ಅವರನ್ನು ಸನ್ಮಾನಿಸಲಾಯಿತು.

ಜಿ.ಪಂ.ಸದಸ್ಯರಾದ ಅಮರಾವತಿ, ನಾರಾಯಣಮ್ಮ, ಹರಿನಾಥರೆಡ್ಡಿ, ತಹಶೀಲ್ದಾರ್ ಟಿ.ಎ. ಹನುಮಂತ ರಾಯ, ಪುರಸಭಾ ಮುಖ್ಯಾಧಿಕಾರಿ ಸುಧಾಕರ್, ಅಧ್ಯಕ್ಷೆ ಸುಜಾತಮ್ಮ, ಉಪಾಧ್ಯಕ್ಷ ಮಹಮ್ಮದ್ ಜಾಕೀರ್, ತಾ.ಪಂ. ಇಒ ಪಿ.ನಾಗಪ್ಪ, ಅಧ್ಯಕ್ಷೆ ಶೋಭಾರಾಣಿ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಶಂಕರರೆಡ್ಡಿ, ನಾರಾಯಣಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದೇರಾಮೆಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಕೃಷ್ಣಪ್ಪ, ಸಮಾಜ ಕಲ್ಯಾಣಾಧಿಕಾರಿ ಮುನಿಯಮ್ಮ, ಪುರಸಭಾ ಸದಸ್ಯ ಚಂದ್ರಶೇಖರ್, ದಲಿತ ಮುಖಂಡ ರಾದ ಎಂ.ಜಿ. ಕಿರಣ್ ಕುಮಾರ್, ಡಾ. ಚಿನ್ನಕೈವಾರಮಯ್ಯ, ಅಂಜನಪ್ಪ, ಗಂಗುಳಪ್ಪ, ಜಯಂತ್   ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.