ನರಸಿಂಹರಾಜಪುರ: ಗೋವುಗಳ ಮಾರಣ ಹೋಮ ತಡೆಯುವ ಉದ್ದೇಶದಿಂದ ಸಿಂಹನಗದ್ದೆ ಬಸ್ತಿಮಠದಲ್ಲಿ ಮಹಾವೀರ ಜಯಂತಿ ಅಂಗವಾಗಿ ಗೋ ರಕ್ಷಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀಮದಭಿನವ ಲಕ್ಷ್ಮೀಸೇನಭಟ್ಟಾರಕ ಮಹಾ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಸಿಂಹನಗದ್ದೆ ಬಸ್ತಿಮಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಗೋರಕ್ಷಾ ಅಭಿಯಾನದ ಪ್ರಕಾರ ನರಸಿಂಹರಾಜಪುರ ತಾಲ್ಲೂಕಿನ ವ್ಯಾಪ್ತಿಯ ರೈತರು ತಮ್ಮ ಗೋವುಗಳನ್ನು ಮಠದ ಗೋ ಶಾಲೆಗೆ ನೀಡಿದರೆ ಅದನ್ನು ಸ್ವೀಕರಿಸಲಾಗುವುದು. ಅಲ್ಲದೆ ರೈತರಿಗೆ ಅಗತ್ಯವಿದ್ದರೆ ಗೋವುಗಳನ್ನು ಸಾಕಣೆ ಮಾಡಲು ಗೋಶಾಲೆಯಿಂದ ಗೋವುಗಳನ್ನು ಸಹ ನೀಡಲಾಗುವುದು. ಯಾವುದೇ ಕಾರಣಕ್ಕೂ ನಮ್ಮಿಂದ ಪಡೆದ ಗೋವುಗಳನ್ನು ಮಾರಾಟ ಮಾಡದೆ ಮನೆಯಲ್ಲಿಯೇ ಸಾಕಾಣಿಕೆ’ ಮಾಡಬೇಕೆಂದರು.
‘ಪ್ರಸ್ತುತ ಬೇಸಿಗೆಯಲ್ಲಿ ಮೇವಿನ ಕೊರತೆ ಇರುವುದರಿಂದ ರೈತರು ಮೇವನ್ನು ಗೋಶಾಲೆಗೆ ನೀಡಿದರೆ ಸ್ವೀಕಾರ ಮಾಡಲಾಗುವುದು. ಅಲ್ಲದೆ ದಾನಿಗಳು ಗೋ ಸಂರಕ್ಷಣೆಗಾಗಿ ಧನ ಸಹಾಯ ನೀಡಬಹುದು. ಸ್ವಯಂ ಸೇವಾ ಸಂಸ್ಥೆಗಳು ಮೇವು, ಧನ ಸಹಾಯ ಅಥವಾ ಗೋ ಶಾಲೆಯಲ್ಲಿ ಕರ ಸೇವೆ ಮಾಡಲು ಅಪೇಕ್ಷೆ ಪಟ್ಟರೆ ಸ್ವಾಗತಿಸಲಾಗುವುದು. ಸರ್ಕಾರವು ಮಠದ ಗೋಶಾಲೆಗೆ ಅನುದಾನ ನೀಡಿದರೆ ಅದನ್ನು ಸ್ವೀಕಾರ ಮಾಡುತ್ತೇವೆ. ಕರುಣಾಮಯಿ ಗೋವುಗಳಿಗೆ ದೊಡ್ಡ ಗೋಶಾಲೆ ನಿರ್ಮಾಣ ಮಾಡಬೇಕಾಗಿದೆ’ ಎಂದರು.
ಮಹಾವೀರ ಜಯಂತಿ
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಇದೇ 29ರಂದು ಮಹಾವೀರ ಜಯಂತಿಯು ಬಸ್ತಿಮಠದ ಚಂದ್ರಶಾಲೆಯಲ್ಲಿ ನಡೆಯಲಿದೆ.
ಅಂದು ಮಹಾವೀರರ ಬಗ್ಗೆ ಉಪನ್ಯಾಸ ನಡೆಯಲಿದ್ದು, ಕೆಲವು ನಗರಗಳಲ್ಲಿ ಮಹಾವೀರ ಜಯಂತಿ ಸಮಾರಂಭದಲ್ಲಿ ಬುದ್ಧನ ಭಾವ ಚಿತ್ರವನ್ನು ಬಳಸಲಾಗುತ್ತಿದೆ. ಅದು ಸರಿಯಲ್ಲ. ಮಹಾವೀರರ ಜಯಂತಿಯಲ್ಲಿ ಮಹಾವೀರರ ಭಾವಚಿತ್ರವನ್ನೇ ಬಳಸಬೇಕು. ಹತ್ತಿರದ ಜೈನ ಸಮಾಜದಲ್ಲಿ ಮಹಾವೀರರ ಭಾವ ಚಿತ್ರ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
**
ರೈತರು ಗೋವುಗಳನ್ನು ಕಸಾಯಿ ಖಾನೆಗೆ ನೀಡದೆ ಮಠದಲ್ಲಿ ಪ್ರಾರಂಭಿಸಿರುವ ಗೋ ಶಾಲೆಗೆ ತರಬೇಕು.
–ಶ್ರೀಮದಭಿನವ ಲಕ್ಷ್ಮೀಸೇನಭಟ್ಟಾರಕ, ಮಹಾ ಸ್ವಾಮೀಜಿ ಸಿಂಹನಗದ್ದೆ ಬಸ್ತಿಮಠ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.