ADVERTISEMENT

ಸ್ಮಾರ್ಟ್ ಕಾರ್ಡ್: ಸಂಘ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 5:30 IST
Last Updated 4 ಫೆಬ್ರುವರಿ 2011, 5:30 IST

ಕೋಲಾರ: ಸರ್ಕಾರಿ ಶಾಲೆ ಶಿಕ್ಷಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಸಲುವಾಗಿ ಅವರ ವೇತನದಿಂದ ಕಟಾವು ಮಾಡುತ್ತಿರುವ 210 ರೂಪಾಯಿಯನ್ನು ಪ್ರತಿ ವರ್ಷವೂ ಪಡೆಯುವುದಿಲ್ಲ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪ್ರಮುಖರಾದ ಅನಿಲಕುಮಾರ್ ಮತ್ತು ವೆಂಕಟಶಿವಪ್ಪ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಾರ್ಡ್ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿರುವ ಅನ್ವಯವೇ ಕ್ಷೇತ್ರ ಶಿಕ್ಷಣಾಧಿಕಾರಿ ಶಿಕ್ಷಕರ ವೇತನದಿಂದ ಶುಲ್ಕವನ್ನು ಕಟಾವು ಮಾಡಿದ್ದಾರೆ. ಕಾರ್ಡ್ ಬೇಡವೆನ್ನುವ ಶಿಕ್ಷಕರು ಪತ್ರವನ್ನು ನೀಡಬೇಕು ಎಂದೂ ಸೂಚಿಸಲಾಗಿದೆ. ಕಾರ್ಡ್ ವಿತರಿಸುವ ಕ್ರಮದ ಬಗ್ಗೆ ಹಲವು ಶಿಕ್ಷಕರು ಸ್ವಾಗತ, ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ನೊಂದ ಶಿಕ್ಷಕರ ಹೆಸರಿನಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಕುರಿತು ಅಪಸ್ವರ ಎತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಆರೋಗ್ಯ ವಿಮೆ: ಆಗ್ರಹ
ಕೋಲಾರ: 
ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಆರೋಗ್ಯ ವಿಮೆ ಸೌಲಭ್ಯ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಲು ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟ ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪ್ರಮುಖರಾದ ಅಪ್ಪಯ್ಯ, ಮಾಲೂರಪ್ಪ, ವಿ.ನಾನಾಚಾರ್ ಮತ್ತು ವೆಂಕಟಸ್ವಾಮಿ, ವಿಮೆ ಸೌಲಭ್ಯದ ಕುರಿತು ಮಾತನಾಡಿದರು. ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ವಿಮೆ ಸೌಲಭ್ಯವನ್ನು ಜಾರಿಗೊಳಿಸಲಾಗುವುದು ಎಂದು 2010ರ ಅ.21ರಂದು ಮುಖ್ಯಮಂತ್ರಿ ಘೋಷಿಸಿದ ಹಿನ್ನೆಲೆಯಲ್ಲಿ ಇಲಾಖೆಯು ನಿವೃತ್ತರ ಮಾಹಿತಿಯನ್ನು ಸಂಗ್ರಹಿಸಿತ್ತು. ಆದರೆ ಇದುವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.