ಚಿಂತಾಮಣಿ: ನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ರೈತರಿಗೆ ಗೂಡಿನ ಮೊತ್ತವನ್ನು ಆನ್ಲೈನ್, ವೈ.ಫೈ ಪೇಮಂಟ್ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮಾರುಕಟ್ಟೆಯ ರೀಲರ್ಸ್ ಸಂಘವು ಬುಧವಾರ ರೇಷ್ಮೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.
ನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ 2 ತಿಂಗಳ ಹಿಂದೆ ಸರ್ವರ್ ಮೂಲಕ ರೈತರ ಗೂಡಿನ ಮಾರಾಟದ ಮೊತ್ತವನ್ನು ನೇರವಾಗಿ ಅವರ ಉಳಿತಾಯ ಖಾತೆಗಳಿಗೆ ಜಮಾ ಮಾಡಲಾಗುತ್ತಿತ್ತು. ಇತ್ತೀಚೆಗೆ ಸರ್ವರ್ ಪದೇ ಪದೇ ಕೈಕೊಡುತ್ತಿರುವ ಕಾರಣ ರೀಲರ್ಸ್ ಮತ್ತು ರೈತರಿಗೂ ತೊಂದರೆ ಆಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದೆ.
ನಗರದ ರೇಷ್ಮೆಗೂಡಿನ ಮಾರುಕಟ್ಟೆಗೆ ಇತ್ತೀಚೆಗೆ ಹೆಚ್ಚಿನ ಲಾಟ್ಗಳು ಮಾರಾಟಕ್ಕೆ ಬರುತ್ತವೆ. ಶಿಡ್ಲಘಟ್ಟ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಇರುವ ಎಲ್ಲ ಸೌಲಭ್ಯಗಳನ್ನು ಇಲ್ಲಿಯೂ ಒದಗಿಸಬೇಕು. ರೈತರ ಖಾತೆಗಳಿಗೆ ನೇರ ಪಾವತಿ ಮಾಡಿದರೆ ರೀಲರ್ಸ್ ಮತ್ತು ರೈತರಿಗೂ ಅನುಕೂಲವಾಗುತ್ತದೆ. ಒಂದು ತಿಂಗಳ ಹಿಂದೆಯೇ ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಕ್ರಮಕೈಗೊಂಡಿಲ್ಲ. ಆದಷ್ಟು ಬೇಗ ನ್ಯೂನತೆ ಸರಿಪಡಿಸಬೇಕು ಮತ್ತು ನ್ಯಾಯವಾದ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟದ ಮಾರ್ಗ ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.