ಗೌರಿಬಿದನೂರು: ತಾಲ್ಲೂಕಿನ ನಗರಗೆರೆ ಗ್ರಾಮದ ಸಮೀಪ ಬುಧವಾರ ಟಿಪ್ಪರ್ ಲಾರಿಯೊಂದು ಕುರಿಗಳ ಹಿಂಡಿನ ಮೇಲೆ ರಭಸವಾಗಿ ಹರಿದು 35ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ.
ಮೃತಪಟ್ಟ ಕುರಿಗಳು ಸ್ಥಳೀಯ ಅಶ್ವತ್ಥಪ್ಪ ಮತ್ತು ಯಂಕಪ್ಪ ಎಂಬುವರಿಗೆ ಸೇರಿದ್ದು, ಸುಮಾರು ₹4 ಲಕ್ಷ ನಷ್ಟವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಎಂದಿನಂತೆ ಈ ಇಬ್ಬರು ಬುಧವಾರ ಗ್ರಾಮದ ಹೊರವಲಯದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಕುರಿಗಳು ನೀರು ಕುಡಿಯಲು ರಸ್ತೆಯ ಮತ್ತೊಂದು ಬದಿಗೆ ದಾಟುತ್ತಿದ್ದಾಗ ಟಿಪ್ಪರ್ ಲಾರಿ ಕುರಿಗಳ ಮೇಲೆ ಹರಿದಿದೆ. ಚಾಲಕನ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎನ್ನಲಾಗಿದೆ.
ನಗರಗೆರೆ ಹೊರಠಾಣೆಯ ಪೊಲೀಸರು ಟಿಪ್ಪರ್ ಅನ್ನು ವಶಕ್ಕೆ ಪಡೆದಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.