ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗ್ರಾಮದ ಇತಿಹಾಸ ಪ್ರಸಿದ್ಧ ಭೋಗ ಮತ್ತು ಯೋಗ ನಂದೀಶ್ವರಸ್ವಾಮಿ ಬ್ರಹ್ಮರಥೋತ್ಸವ ಫೆಬ್ರುವರಿ 14 ರಂದು ನಡೆಯಲಿದೆ. ಜಾತ್ರೆಗಾಗಿ ದೇವಾಲಯದ ಆವರಣದಲ್ಲಿ ಸಿದ್ಧತಾ ಕಾರ್ಯಗಳು ಜೋರಾಗಿ ನಡೆದಿದ್ದು, ಎರಡು ಬೃಹತ್ ರಥಗಳನ್ನು ಅಣಿಗೊಳಿಸಲಾಗುತ್ತಿದೆ.
ಮಹಾ ಶಿವರಾತ್ರಿ ದಿನ ಪ್ರತಿ ವರ್ಷದಂತೆ ಈ ಬಾರಿ ಭೋಗ ನಂದೀಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಬ್ರಹ್ಮರಥೋತ್ಸವಕ್ಕೆ ಎರಡು ದಿನ ಬಾಕಿ ಇರುವಾಗಲೇ ಮಹೋತ್ಸವಕ್ಕಾಗಿ ಸಿದ್ಧತೆ ಭರದಿಂದ ನಡೆಯುತ್ತಿದೆ.
ಈಗಾಗಲೇ ರಥ ನಿರ್ಮಾಣದ ಕಾರ್ಯ ಅಂತಿಮ ಹಂತದಲ್ಲಿದ್ದು, ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಜನರ ನೂಕು ನುಗ್ಗುಲು ತಪ್ಪಿಸಲು ಪೊಲೀಸರು ಅಗತ್ಯವಿರುವ ಕಡೆ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದಾರೆ.
ಜಾತ್ರೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಮಾತ್ರವಲ್ಲದೆ ಕೋಲಾರ, ತುಮಕೂರು, ಬೆಂಗಳೂರು ಮತ್ತು ಆಂಧ್ರ ಸೇರಿದಂತೆ ವಿವಿಧಡೆಯಿಂದ ಭಕ್ತರು ಬರಲಿದ್ದಾರೆ. ಈ ವೇಳೆ ಅಹಿತಕರ ಘಟನೆ ನಡೆಯದಂತೆ ಮುಜರಾಯಿ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. 200ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲು ನಿರ್ಧರಿಸಲಾಗಿದ್ದು, ಭಕ್ತರಿಗಾಗಿ ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಬೆಂಗಳೂರಿನಿಂದ ನಂದಿ ಹಾಗೂ ನಂದಿಬೆಟ್ಟಕ್ಕೆ –ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ದೇಗುಲದ ಸುತ್ತಲು ಪೂಜಾ ಸಾಮಗ್ರಿ, ತಿಂಡಿ ತಿನಿಸು, ಆಟಿಕೆ ವಸ್ತುಗಳು, ಆಲಂಕಾರಿಕ ವಸ್ತುಗಳು, ಹಣ್ಣು, ತಂಪು ಪಾನೀಯ ಸೇರಿದಂತೆ ವಿವಿಧ ಬಗೆಯ ಮಳಿಗೆಗಳು ತಲೆ ಎತ್ತಿವೆ. ಮನರಂಜನಾ ಆಟಗಳ ಯಂತ್ರೋ ಪಕರಣಗಳನ್ನು ಅಳವಡಿಸಲಾಗಿದೆ.
ಎಂದಿನಂತೆ ಜಾತ್ರೆಗೆ ಪೂರ್ವಭಾವಿ ಯಾಗಿ ರಾಸುಗಳ ಸಂತೆ ಆರಂಭವಾಗಿದೆ. ಈ ಬಾರಿ ಬೆರಳಣಿಕೆಯಷ್ಟು ರಾಸುಗಳು ಮಾತ್ರ ಬಂದಿವೆ. ಇನ್ನೂ ಒಂದೆರಡು ದಿನದಲ್ಲಿ ಹೆಚ್ಚಿನ ಸಂಖ್ಯೆಯ ರಾಸುಗಳು ಬರುವ ನಿರೀಕ್ಷೆ ಇರುವುದರಿಂದ ಪೆಂಡಾಲ್, ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.