ADVERTISEMENT

800 ಕೆ.ಜಿ ರಕ್ತಚಂದನ ವಶ

ಸಿನಿಮೀಯ ರೀತಿಯಲ್ಲಿ ವಾಹನ ಬೆನ್ನತ್ತಿ ಆರೋಪಿಗಳನ್ನು ಬಂಧಿಸಿದ ಅರಣ್ಯ ಇಲಾಖೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 15:36 IST
Last Updated 22 ಅಕ್ಟೋಬರ್ 2020, 15:36 IST
ಅರಣ್ಯ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿದ ವಾಹನದಲ್ಲಿ ಕಂಡುಬಂದ ರಕ್ತಚಂದನದ ತುಂಡುಗಳು
ಅರಣ್ಯ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿದ ವಾಹನದಲ್ಲಿ ಕಂಡುಬಂದ ರಕ್ತಚಂದನದ ತುಂಡುಗಳು   

ಚಿಕ್ಕಬಳ್ಳಾಪುರ: ನೆರೆಯ ಆಂಧ್ರಪ್ರದೇಶದಿಂದ ಗುರುವಾರ ಬೆಳಿಗ್ಗೆ 800 ಕೆ.ಜಿ ರಕ್ತಚಂದನವನ್ನು ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನುಅರಣ್ಯ ಇಲಾಖೆ ಸಿಬ್ಬಂದಿ ಸಿನಿಮೀಯ ರೀತಿಯಲ್ಲಿ ಬೆನ್ನತ್ತಿ ಇಬ್ಬರು ಆರೋಪಿಗಳನ್ನು ಬಂಧಿಸುವ ಜತೆಗೆ ರಕ್ತಚಂದನ ವಶಪಡಿಸಿಕೊಂಡಿದ್ದಾರೆ.

ಬಾಗೇಪಲ್ಲಿಯಿಂದ ಬೆಂಗಳೂರಿನ ಕಡೆಗೆ ಅಕ್ರಮವಾಗಿ ರಕ್ತಚಂದನದ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಉಪವಲಯ ಅರಣ್ಯ ಅಧಿಕಾರಿ ತನ್ವೀರ್ ಅಹ್ಮದ್ ಹಾಗೂ ಸಿಬ್ಬಂದಿ ಹೆದ್ದಾರಿ 7ರಲ್ಲಿ ಸ್ಕಾರ್ಪಿಯೋ ನಿಲ್ಲಿಸಲು ಸೂಚಿಸಿದ್ದಾರೆ.

ಈ ವೇಳೆ ರಕ್ತಚಂದನ ಸಾಗಿಸುತ್ತಿದ್ದ ಆರೋಪಿಗಳು ವಾಹನ ನಿಲ್ಲಿಸದೆ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ವಾಹನದಲ್ಲಿ ಸ್ಕಾರ್ಪಿಯೋ ಬೆನ್ನತ್ತಿದ್ದಾರೆ. ಇದರಿಂದ ಗಾಬರಿಯಾದ ಆರೋಪಿಗಳು ನಗರ ಹೊರವಲಯದ ವಾಪಸಂದ್ರ ಬಳಿ ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದು ನಿಲ್ಲಿಸಿದ್ದಾರೆ.

ADVERTISEMENT

ಡಿಕ್ಕಿ ರಭಸಕ್ಕೆ ಸ್ಕಾರ್ಪಿಯೋ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದ ಪರಿಣಾಮ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಅನಂತಪುರಂ ಜಿಲ್ಲೆಯ ಮದ್ದರೆಡ್ಡಿ ನಾಯಕ ಹಾಗೂ ಬೆಂಗಳೂರು ಗ್ರಾಮಾಂತರ ಹೊಸಕೋಟೆಯ ಬಾಷಾ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಚಾಲಕ ಮದ್ದರೆಡ್ಡಿ ನಾಯಕನ ಕಾಲು ಮುರಿದ್ದಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.