ಚಿಂತಾಮಣಿ: ಚಿಂತಾಮಣಿ-ಕೋಲಾರ ರಸ್ತೆಯ ಕುರುಟಹಳ್ಳಿ ಕ್ರಾಸ್ ಬಳಿ ಬುಧವಾರ ಬೊಲೆರೋ ಮತ್ತು ಟಾಟಾ ಏಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.
ತಾಲ್ಲೂಕಿನ ಕೈವಾರ ಹೋಬಳಿಯ ಟಿ.ಹೊಸಹಳ್ಳಿ ಗ್ರಾಮದ ನಾರಾಯಣಸ್ವಾಮಿ(55) ಮೃತಪಟ್ಟಿರುವ ವ್ಯಕ್ತಿ. ಟಾಟಾ ಏಸ್ ಚಾಲಕ ಕೇರಳದ ನಿವಾಸಿ ವಿಷ್ಣು, ಬೊಲೆರೋ ವಾಹನದ ಮಾಲೀಕ ಮಂಜುನಾಥ್, ಚಾಲಕ ಆದರ್ಶ, ವಾಹನದಲ್ಲಿದ್ದ ಅಜಯ್ ಕುಮಾರ್, ಅನಿತಮ್ಮ, ನರಸಮ್ಮ, ಲಕ್ಷ್ಮಮ್ಮ, ಗಾಯಾಳುಗಳಾಗಿದ್ದಾರೆ.
ಹೊಸಕೋಟೆಯಿಂದ ಟಾಟಾ ಏಸ್ ವಾಹನವು ಕುರುಟಹಳ್ಳಿ ಮಾರ್ಗವಾಗಿ ಚಂತಾಮಣಿಗೆ ಬರುತ್ತಿತ್ತು. ಶ್ರೀನಿವಾಸಪುರದ ಕಡೆಯಿಂದ ಹೂಕೋಸು ತುಂಬಿಕೊಂಡು ಕೂಲಿಯಾಳುಗಳೊಂದಿಗೆ ಬರುತ್ತಿದ್ದ ಬೊಲೆರೋ ವಾಹನ ಟಿ.ಹೊಸಹಳ್ಳಿ ಕಡೆಗೆ ಹೋಗುತ್ತಿತ್ತು. ಎರಡು ವಾಹನಗಳು ಮುಖಾಮುಖಿ ಢಿಕ್ಕಿಯಾಗಿವೆ. ಬೊಲೆರೋ ವಾಹನ ರಸ್ತೆ ಬದಿಗೆ ಮುಗುಚಿಬಿದ್ದಿತ್ತು. ಕೋಸು ಮೂಟೆಗಳು ಚೆಲ್ಲಾಪಿಲ್ಲಿಯಾಗಿದ್ದವು.
ರಸ್ತೆಯಲ್ಲಿ ಉರುಳಿಬಿದ್ದಿದ್ದ ಬೊಲೆರೋ ವಾಹನವನ್ನು ಗ್ರಾಮಾಂತರ ಠಾಣೆ ಪೊಲೀಸರು ಕ್ರೇನ್ ಮೂಲಕ ರಸ್ತೆಯ ಪಕ್ಕಕ್ಕೆ ಸರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮೃತಪಟ್ಟಿರುವ ನಾರಾಯಣಸ್ವಾಮಿ ಹಾಗೂ ಗಾಯಾಳುಗಳು ಹೂಕೋಸು ಕೊಯ್ಯಲು ತಾಲ್ಲೂಕಿನ ಹೊಸಹಳ್ಳಿ ಗ್ರಾಮದಿಂದ ಹೋಗಿದ್ದ ಕೂಲಿಯಾಳುಗಳು ಎಂದು ತಿಳಿದುಬಂದಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.