ADVERTISEMENT

ಫೆಬ್ರುವರಿ 2ನೇ ವಾರದಲ್ಲಿ ಕೃಷಿ ಮೇಳ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 13:43 IST
Last Updated 28 ಜನವರಿ 2020, 13:43 IST
.
.   

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಪಶು ಸಂಗೋಪನೆ ಇಲಾಖೆಗಳು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಫೆಬ್ರುವರಿ ಎರಡನೇ ವಾರದಲ್ಲಿ ಕೃಷಿ ಮೇಳ, ಸಾವಯವ ಮತ್ತು ಸಿರಿಧಾನ್ಯಗಳ ಮೇಳ, ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ಲತಾ, ‘ಜಿಲ್ಲೆಯ ರೈತರ ಆತ್ಮಸ್ಥೈರ್ಯ ವೃದ್ಧಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗುತ್ತಿದೆ. ಮೇಳದಲ್ಲಿ ಫಲಪುಷ್ಪ ಪ್ರದರ್ಶನದ ಜನತೆಗೆ ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ಕೃಷಿ ಪರಿಕರ ಮಳಿಗೆಗಳ ಪ್ರದರ್ಶನ, ಜಲಾನಯನ ಮತ್ತು ಕೃಷಿ ಭಾಗ್ಯ ಮಾದರಿಗಳ ಪ್ರದರ್ಶನ, ಆರೋಗ್ಯಕರ ಮತ್ತು ರುಚಿಕರವಾದ ಸಾವಯವ ಮತ್ತು ಸಿರಿಧಾನ್ಯಗಳ ಆಹಾರ ಮಳಿಗೆಗಳು ಇರಲಿವೆ’ ಎಂದು ಹೇಳಿದರು.

‘ಮೇಳದಲ್ಲಿ ಸಾಧಕ ರೈತರಿಗೆ ಸನ್ಮಾನಿಸಲಾಗುತ್ತದೆ. ರಾಗಿ ಮುದ್ದೆ ತಿನ್ನುವುದು, ರಂಗೋಲಿ ಬಿಡಿಸುವುದು, ಮೂಟೆ ಹೊರುವುದು, ಸಿರಿಧಾನ್ಯಗಳ ಅಡುಗೆ ತಯಾರಿಸುವುದು ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಸೆಲ್ಫಿ ಬೂತ್ ತೆರೆಯಲಾಗುತ್ತದೆ. ಪರಿಸರ ಸಂರಕ್ಷಣೆ ಮತ್ತು ಕೃಷಿಯ ಬಗ್ಗೆ ಮಕ್ಕಳು ರೈತರು ಮತ್ತು ವಿಜ್ಞಾನಿಗಳ ಸಂವಾದ ನಡೆಯಲಿದೆ. ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಮೇಳದ ವಿಶೇಷ ಆಕರ್ಷಣೆಯಾಗಲಿವೆ’ ಎಂದು ತಿಳಿಸಿದರು.

ADVERTISEMENT

‘ಮೇಳದಲ್ಲಿ ಹಸು, ಎಮ್ಮೆ, ಕೋಳಿ ಮತ್ತು ಹಂದಿಗಳು ಸೇರಿದಂತೆ ಸಾಕು ಪ್ರಾಣಿಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ. ಕೃಷಿ ಮೇಳದ ಅಂಗವಾಗಿ ಆರೋಗ್ಯಕ್ಕಾಗಿ, ರೈತರಿಗಾಗಿ ಮತ್ತು ಪರಿಸರಕ್ಕಾಗಿ ‘ಸಿರಿಧಾನ್ಯಗಳಿಗೆಡೆಗೆ ನಮ್ಮ ನಡಿಗೆ‘ ಜಾಥಾ ಕಾರ್ಯಕ್ರಮ ಏರ್ಪಡಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಂಟಿ ಕೃಷಿ ನಿರ್ದೇಶಕಿ ರೂಪಾ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಅನುರೂಪಾ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.