ಬಾಗೇಪಲ್ಲಿ: ದೇಶದ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರಜೆಗಳಿಗೆ ರಾಜ್ಯ ಆಳುವ ಅಧಿಕಾರ ಸಿಗಬೇಕಿದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಶಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ತಾಲ್ಲೂಕು ಆಡಳಿತ, ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆಯಿಂದ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಂ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ದಲಿತರಿಗೆ ರಾಜ್ಯವಾಳುವ ಅಧಿಕಾರ ಬೇಕಿದೆ. ಆ ಅಧಿಕಾರ ಪಡೆದುಕೊಂಡು ವಿಧಾನಸಭೆ, ಸಂಸತ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರಬೇಕಿದೆ ಎಂದು ಹೇಳಿದರು.
ದಲಿತರು ದೇವಾಲಯ ಪ್ರವೇಶ ಮಾಡುವುದರಿಂದ, ಯಾರೋ ದಲಿತರ ಮನೆಯನ್ನು ಪ್ರವೇಶ ಮಾಡುವುದರಿಂದ ಈ ದೇಶದ ಕೋಟಿ ಕೋಟಿ ದಲಿತರಿಗೆ ಯಾವುದೇ ಪ್ರಯೋಜನವಿಲ್ಲ. ಅದರ ಬದಲಿಗೆ ದಲಿತರು ಹೆಚ್ಚು ವಿದ್ಯಾವಂತರಾಗಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕಿದೆ ಎಂದು ಹೇಳಿದರು.
ರಾಜಕಾರಣಿಗಳಾಗಿ ಸಂಸತ್, ವಿಧಾನಸಭೆ ಪ್ರವೇಶ ಮಾಡಬೇಕು. ಆಗ ಮಾತ್ರ ಈ ದೇಶದ ದಲಿತರಿಗೆ ನ್ಯಾಯ ಸಿಗಲಿದೆ. ಅಂಬೇಡ್ಕರ್ ಆಚರಣೆಗೂ ಅರ್ಥ ಬರಲಿದೆ. ಇದರೊಂದಿಗೆ ದಲಿತ ಸಮುದಾಯಗಳು ಅಭಿವೃದ್ಧಿಗಾಗಿ
ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚಿನ್ನಕೈವಾರಮಯ್ಯ ಮಾತನಾಡಿ, ಅಂಬೇಡ್ಕರ್ ಅಸ್ಪೃಶ್ಯ ಜಾತಿಯಲ್ಲಿ ಜನಿಸಿ ಅನೇಕ ಅವಮಾನ ಅನುಭವಿಸಿದ್ದಾರೆ. ಅಂತಹ ಅವಮಾನಗಳಿಗೆ ಉತ್ತರವಾಗಿ ಉತ್ತಮ ಶಿಕ್ಷಣ ಪಡೆದರು. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯವೆಂದು ಹೇಳಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಎನ್. ಮಂಜುನಾಥಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಕೆ. ಮಧುಕರ್, ಅಧ್ಯಕ್ಷೆ ರೇಷ್ಮಾ ಬಾನು ನಯಾಜ್, ಉಪಾಧ್ಯಕ್ಷ ಎ. ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಸಿದ್ದಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಡಿ.ಆರ್. ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಸಿ.ಎನ್. ಶೇಷಾದ್ರಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಸಿ.ಎನ್. ಸತ್ಯನಾರಾಯಣರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.