
ವಂಚನೆ
ಚಿಂತಾಮಣಿ: ನಗರದ ಬೆಂಗಳೂರು ರಸ್ತೆಯಲ್ಲಿರುವ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಅಪರಿಚಿತರು ₹33 ಸಾವಿರ ವಂಚನೆ ಮಾಡಿದ್ದಾರೆ ಎಂದು ನಗರ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಲಾಗಿದೆ.
ತಾಲ್ಲೂಕಿನ ಬ್ರಾಹ್ಮಣದಿನ್ನೆ ಗ್ರಾಮದ ಶ್ರೀನಿವಾಸ್ ಹಣ ಕಳೆದುಕೊಂಡವರು.
ಶ್ರೀನಿವಾಸ್ ಅವರ ಪತ್ನಿ ಸರಸ್ವತಮ್ಮ ಹೆಸರಿನಲ್ಲಿ ತಾಲ್ಲೂಕಿನ ಅನೂರು ಎಸ್ಬಿಐ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಇದೆ. ಅವರ ಎಟಿಎಂ ಕಾರ್ಡ್ನಿಂದ ಹಣಕಾಸಿನ ವ್ಯವಹಾರ ನಡೆಸುತ್ತಿದ್ದೆ. ನಗರದ ಬೆಂಗಳೂರು ರಸ್ತೆಯ ಎಟಿಎಂ ಕೇಂದ್ರದಲ್ಲಿ ಹಣ ಹಣ ಡ್ರಾ ಮಾಡಲು ಹೋಗಿದ್ದೆ. ಯಂತ್ರದಿಂದ ಹಣ ಪಡೆಯಲು ಸಾಧ್ಯವಾಗಲಿಲ್ಲ. ಪಕ್ಕದಲ್ಲಿದ್ದ ವ್ಯಕಿಯೊಬ್ಬರು ಹಣ ತೆಗೆದುಕೊಡುವುದಾಗಿ ಎಟಿಎಂ ಕಾರ್ಡ್ ತೆಗೆದುಕೊಂಡರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅವರು ₹5 ಸಾವಿರ ಡ್ರಾ ಮಾಡುವ ಸಮಯಕ್ಕೆ ಸರಿಯಾಗಿ ಮತ್ತೊಬ್ಬ ವ್ಯಕ್ತಿ ಅಲ್ಲಿಗೆ ಬಂದ. ಇಬ್ಬರೂ ಮಾತನಾಡಿಕೊಂಡು ನನ್ನ ಕೈಗೆ ಹಣ ಮತ್ತು ಎಟಿಎಂ ಕಾರ್ಡ್ ನೀಡಿ ಹೊರಟು ಹೋದರು. ನಾನು ಮನೆಗೆ ಹೋದ ಕೂಡಲೇ 10 ಬಾರಿ ಹಣ ಡ್ರಾ ಮಾಡಿದ್ದೀರಿ ಏಕೆ ಎಂದು ಪತ್ನಿ ಪ್ರಶ್ನಿಸಿದರು. ಆಗ ನಾನು ವಂಚನೆಗೆ ಒಳಗಾಗಿರುವುದು ಗೊತ್ತಾಯಿತು. ಎಟಿಎಂ ಕಾರ್ಡ್ ಪರಿಶೀಲಿಸಿದಾಗ ಅದು ನಮ್ಮ ಕಾರ್ಡ್ ಆಗಿರಲಿಲ್ಲ. ಯಾರೋ ಸುನೀತಾ ಎಂಬುವವರ ಕಾರ್ಡ್ ಆಗಿತ್ತು.
ತಕ್ಷಣ ಬ್ಯಾಂಕ್ ಶಾಖೆಗೆ ಹೋಗಿ ಖಾತೆ ಬ್ಲಾಕ್ ಮಾಡಿಸಿದೆ. ಆಗಂತುಕರು ಬೇರೆ ಯಾವುದೋ ಕಾರ್ಡ್ ನೀಡಿದ್ದಾರೆ. ನನ್ನ ಕಾರ್ಡ್ನಿಂದ ₹33,150 ಡ್ರಾ ಮಾಡಿಕೊಂಡಿದ್ದಾರೆ. ಆಗಂತುಕರನ್ನು ಪತ್ತೆ ಮಾಡಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ನಗರಠಾಣೆ ಇನ್ಸ್ಪೆಕ್ಟರ್ ವಿಜಿಕುಮಾರ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ದೂರುದಾರರೊಂದಿಗೆ ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.