ಬಾಗೇಪಲ್ಲಿ: ಪಟ್ಟಣದ ಡಿವಿಜಿ ಮುಖ್ಯರಸ್ತೆ ಪಕ್ಕದಲ್ಲಿ ಸಾರ್ವಜನಿಕ ಆಸ್ಪತ್ರೆ ಇದೆ. 16 ವೈದ್ಯರ ಮಂಜೂರಾತಿಗೆ 5 ವೈದ್ಯರು, ಶುಶ್ರೂಷಕಿ, ಸಿಬ್ಬಂದಿ ಕೊರತೆ, ಡಿ.ಗ್ರೂಪ್ ನೌಕರರ ಕೊರತೆ ನಡುವೆ ಆಸ್ಪತ್ರೆ ನಡೆಯುತ್ತಿದೆ.
ಪ್ರತಿದಿನ 500 ರಿಂದ 600 ಹೊರರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಸೂಕ್ತ ಪರೀಕ್ಷೆ ಪಡೆಯಲು ಪರದಾಟವಾಗುತ್ತದೆ. ವಿಶ್ರಾಂತಿ ಪಡೆಯಲು ಕುರ್ಚಿ ಇಲ್ಲ. ಕಿರಿದಾದ ಜಾಗದಲ್ಲಿ ಆಂಬುಲೆನ್ಸ್ ಸಂಚರಿಸಲು, ರೋಗಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಆಸ್ಪತ್ರೆಗೆ ಬರುವ ಕೃಷಿಕೂಲಿಕಾರ್ಮಿಕರಿಗೆ, ಜನಸಾಮಾನ್ಯರಿಗೆ ಸೂಕ್ತ ಚಿಕಿತ್ಸೆ ಸಿಗದೆ ಸೌಲಭ್ಯ ಕಲ್ಪಿಸದ ಸರ್ಕಾರಕ್ಕೆ ರೋಗಿಗಳು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಮಿಟ್ಟೇಮರಿ, ಪಾತಪಾಳ್ಯ, ಗೂಳೂರು, ಕಸಬಾ ಹೋಬಳಿಗಳ ಪೈಕಿ 250ಕ್ಕೂ ಹೆಚ್ಚು ಗ್ರಾಮಗಳು, ಲಂಬಾಣಿ ತಾಂಡ ಇವೆ. ಆಂಧ್ರ, ತೆಲಂಗಾಣ, ಮಹರಾಷ್ಟ್ರ ಸೇರಿದಂತೆ ವಿವಿಧ ಕಡೆಗಳಿಗೆ ಪ್ರತಿದಿನ ನೂರಾರು ವಾಹನ ಸಂಚರಿಸುತ್ತವೆ. ಅಪಘಾತ ಸಂಭವಿಸಿದಾಗ ತುರ್ತು ಚಿಕಿತ್ಸೆಗೆ ಸಮರ್ಪಕ ಆಂಬುಲೆನ್ಸ್ ಇಲ್ಲ.
ಇದೀಗ ಆನ್ಲೈನ್ನಲ್ಲಿ ಚೀಟಿ ಪಡೆಯಬೇಕು. ಚೀಟಿ ವಿತರಣಾ ಕೌಂಟರ್ನಲ್ಲಿ ಆರೋಗ್ಯ ರಕ್ಷಾ ಸಮಿತಿಯಿಂದ 3 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ರೋಗಿಗಳ ಹೆಸರು, ಮೊಬೈಲ್ ಸಂಖ್ಯೆ ನೊಂದಣಿ ಮಾಡಬೇಕಾಗಿದೆ. ಹೀಗಾಗಿ ಚೀಟಿ ಪಡೆಯಲು ಗಂಟೆಗಟ್ಟಲೆ ಕಾಯಬೇಕಾಗಿದೆ.
ಆಸ್ಪತ್ರೆಯಲ್ಲಿ ನುರಿತ ವೈದ್ಯರು, ತಂತ್ರಜ್ಞರು, ಶುಶ್ರೂಷಕಿ, ಸಿಬ್ಬಂದಿ, ಡಿ ಗ್ರೂಪ್ ನೌಕರರ ಕೊರತೆ ಇದೆ. ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ವಾಹನಗಳ ಪಾರ್ಕಿಂಗ್ ಅಡ್ಡಾದಿಡ್ಡಿಯಾಗಿದೆ.
‘ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ವೈದ್ಯ, ಸಿಬ್ಬಂದಿ ನೇಮಕ ಮಾಡುವಂತೆ ಮನವಿ ಮಾಡಲಾಗಿದೆ. ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ, ಡಿವೈಎಸ್ಸಿ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಎಚ್.ಎನ್.ಗೋವಿಂದರೆಡ್ಡಿ ಹೇಳಿದರು.
ಸರ್ಕಾರಿ ಆಸ್ಪತ್ರೆಯಿಂದ ಮಹಿಳೆಯರ, ಮಕ್ಕಳ ಆಸ್ಪತ್ರೆ ಪ್ರತ್ಯೇಕ ಮಾಡಬೇಕು. ವೈದ್ಯರು, ಸಿಬ್ಬಂದಿ, ನೌಕರರನ್ನು ನೇಮಕ ಮಾಡಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವಿನಯ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.