
ಬಾಗೇಪಲ್ಲಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ 287ನೇ ಸಂತ ಸೇವಾಲಾಲ್ ಜಯಂತಿ ನಡೆಯಿತು.
ತಹಶೀಲ್ದಾರ್ ಮನೀಷಾ ಎನ್ ಪತ್ರಿ ಮಾತನಾಡಿ, ತಳಮಟ್ಟದ ಸಮುದಾಯಗಳು ಇಂದಿಗೂ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿವೆ. ಮಕ್ಕಳಿಗೆ ಶಿಕ್ಷಣ ಕಲಿಸಿದರೆ ಮಾತ್ರ ಸಮುದಾಯಗಳ ಪ್ರಗತಿ ಸಾಧ್ಯ. ಅನೇಕರಿಗೆ ಓದು-ಬರಹ ಇಲ್ಲದಿರುವುದು ಪ್ರಗತಿಗೆ ಅಡ್ಡಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂತ ಸೇವಾಲಾಲ್ ಸೇರಿದಂತೆ ಅನೇಕ ಸಂತರು ಜಾತಿ ವ್ಯವಸ್ಥೆ, ಮೂಢನಂಬಿಕೆ ಮತ್ತು ಅನಿಷ್ಠ ಪದ್ಧತಿ ವಿರುದ್ಧ ಜನಜಾಗೃತಿ ಮೂಡಿಸಿದ್ದಾರೆ. ಬೆಟ್ಟಗುಡ್ಡಗಳ ನಡುವೆ ವಾಸಿಸುವ ಲಂಬಾಣಿ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
ಗೋರ್ಬಂಜಾರ್ (ಲಂಬಾಣಿ) ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಶ್ರೀರಾಮನಾಯಕ್ ಮಾತನಾಡಿ, 18ನೇ ಶತಮಾನದಲ್ಲಿ ಲಂಬಾಣಿ ಸಮುದಾಯದ ಹಕ್ಕುಗಳಿಗಾಗಿ ಸೇವಾಲಾಲ್ ಹೋರಾಟ ಮಾಡಿದರು. ಅಜ್ಞಾನದ ಅಂಧಕಾರ ದೂರಮಾಡಲು ಶಿಕ್ಷಣ ಅಗತ್ಯ. ಬಡತನ ರೇಖೆಗಿಂತ ಕೆಳಗಿರುವ ಲಂಬಾಣಿ ಸಮುದಾಯಕ್ಕೆ ನಿವೇಶನ, ಮನೆ, ಸಾಲ ಸೌಲಭ್ಯ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಜಾನಪದ ಕಲಾವಿದ ಗೋಪಿನಾಯಕ್ ಕ್ರಾಂತಿಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಸಾಕ್ಷರತಾ ಅಧಿಕಾರಿ ಶಿವಪ್ಪ, ಡಾ.ಕೃಷ್ಣಮೂರ್ತಿ, ಶಿವಪ್ಪ, ನಾರಾಯಣನಾಯಕ್, ಶಂಕರಪ್ಪ, ಶಂಕರನಾಯಕ್, ನಾಗೇನಾಯಕ್, ಬಾಲುನಾಯಕ್, ಮಂಜುನಾಥನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.