ADVERTISEMENT

ಸುಧಾಕರ್ ಸೋಲಿಸಿ ಸ್ವಾಭಿಮಾನ ಗೆಲ್ಲಿಸಿ

ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 13:56 IST
Last Updated 21 ನವೆಂಬರ್ 2019, 13:56 IST
ತಾಲ್ಲೂಕಿನ ಬಾಲರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಉಪ ಚುನಾವಣೆ ವೀಕ್ಷಕ, ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ಮಾತನಾಡಿದರು.
ತಾಲ್ಲೂಕಿನ ಬಾಲರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಉಪ ಚುನಾವಣೆ ವೀಕ್ಷಕ, ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಮತದಾರರು ಆಯ್ಕೆ ಮಾಡಿ ಕಳುಹಿಸಿದ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಸ್ವಾರ್ಥ ಮತ್ತು ಹಣದ ಆಸೆಗಾಗಿ ಮುಂಬೈನಲ್ಲಿ ಬಿಜೆಪಿಗೆ ₹100 ಕೋಟಿಗೆ ಮಾರಾಟವಾಗಿದ್ದಾರೆ. ಅವರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಹೇಳಿದರು.

ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಸುಧಾಕರ್ ಒಬ್ಬ ಮೋಸಗಾರ, ನಯವಂಚಕ, ಅಂತಹ ಅನರ್ಹ ವ್ಯಕ್ತಿಗೆ ಮತ ನೀಡಿ ನಿಮ್ಮ ಸ್ವಾಭಿಮಾನ ಕಳೆದುಕೊಳ್ಳಬೇಡಿ. ಜಿಲ್ಲೆಯ ಗೌರವವನ್ನು ಕಳೆದು ಉಪ ಚುನಾವಣೆ ಬರುವ ರೀತಿ ಮಾಡಿರುವ ಭ್ರಷ್ಟ ಸುಧಾಕರ್ ಅವರನ್ನು ಸೋಲಿಸಿ ಸ್ವಾಭಿಮಾನ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

‘ಒಂದೊಮ್ಮೆ ಈ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿದರೆ, ಬಸ್ ಸಮಸ್ಯೆ, ಶುದ್ಧ ಕುಡಿಯುವ ನೀರು ಘಟಕಗಳ ಸ್ಥಾಪನೆ, ಕೆರೆಗಳ ಅಭಿವೃದ್ಧಿ ಮುಂತಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಕಲ್ಪಿಸಲು ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ಉಪ ಚುನಾವಣೆ ವೀಕ್ಷಕ, ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ಮಾತನಾಡಿ, ‘ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಬರಗಾಲ ಬಂದಾಗ ಎಂಟು ತಿಂಗಳ ಕಾಲ ಅಂಜನಪ್ಪ ಅವರು ತಾಲ್ಲೂಕಿನ ಜನತೆಗೆ ಉಚಿತ ಅಕ್ಕಿ, ಗೋಧಿ, ಸಕ್ಕರೆ ವಿತರಿಸುವ ಮೂಲಕ ಜನಪರ ಕೆಲಸ ಮಾಡಿದ್ದಾರೆ. ಮುಂದೆ ಇದೇ ಮಾದರಿಯಲ್ಲಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ತಂದರು. ಅದಕ್ಕೆ ಕಾರಣಕರ್ತರಾದ ಅಂಜನಪ್ಪ ಅವರಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.

‘ರಿಲಯನ್ಸ್ ಕಂಪನಿಗೆ ಮೋಸ ಮಾಡಿ ಹಣ ಸಂಪಾದಿಸಿ, ರಾಜಕೀಯಕ್ಕೆ ಬಂದ ಸುಧಾಕರ್ ಅವರು, ನೀವು ಕೊಟ್ಟ ತಾಯಿ ಸಮಾನವಾದ ಮತವನ್ನು ಮಾರಿಕೊಂಡಿದ್ದಾರೆ. ಅಂತಹ ಮೋಸಗಾರನಿಗೆ ಬುದ್ದಿ ಕಲಿಸಿ, ರಾಜಕೀಯದಿಂದ ಶಾಶ್ವತವಾಗಿ ದೂರ ಇಡಬೇಕು’ ತಿಳಿಸಿದರು.

ಮುಖಂಡ ಕೆ.ವಿ.ನವೀನ್ ಕಿರಣ್ ಮಾತನಾಡಿ, ‘ರಂಗೋಲಿ ಸ್ಪರ್ಧೆ ಮಾಡಿ, ಜನರಿಗೆ ಸೀರೆ, ಕುಕ್ಕರ್, ಮಿಕ್ಸಿಯಂತಹ ವಸ್ತುಗಳನ್ನು ನೀಡಿ ಕಳೆದ ವರ್ಷ ಜನರ ಮತ ಲೂಟಿ ಮಾಡಿದ ಸುಧಾಕರ್ ಅವರು ಈ ಬಾರಿ ಏನನ್ನು ನೀಡಲಿಲ್ಲ. ಜನತೆ ಇದನ್ನು ಅರಿಯಬೇಕು. ನಿಮ್ಮ ಮತವನ್ನು ಬಿಜೆಪಿಗೆ ಮಾರಿ ಅನರ್ಹಗೊಂಡ ವ್ಯಕ್ತಿಗೆ ನೀಡಬೇಡಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.