ADVERTISEMENT

ಚಿಂತಾಮಣಿ: ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಮೊತ್ತ

2006–07ರಲ್ಲಿ ನೋಂದಣಿಯಾಗಿದ್ದ 1,314 ಮಂದಿ ಪೈಕಿ 1,160 ಮೊತ್ತ ಪಾವತಿ

ಎಂ.ರಾಮಕೃಷ್ಣಪ್ಪ
Published 21 ಫೆಬ್ರುವರಿ 2026, 7:00 IST
Last Updated 21 ಫೆಬ್ರುವರಿ 2026, 7:00 IST
   

ಚಿಂತಾಮಣಿ: ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಹೆಣ್ಣುಮಗುವಿನ ಭವಿಷ್ಯಕ್ಕಾಗಿ 2006–07ರಲ್ಲಿ ಅನುಷ್ಠಾನಕ್ಕೆ ತರಲಾಗಿದ್ದ ‘ಭಾಗ್ಯಲಕ್ಷ್ಮಿ ಬಾಂಡ್’ ಯೋಜನೆಯ ಪರಿಪಕ್ವ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಆರ್‌ಟಿಜಿಎಸ್ ಮೂಲಕ ಜಮೆ ಮಾಡಲಾಗುತ್ತಿದೆ.

ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಲ್ಲಿ ಜನಿಸಿದ ಹೆಣ್ಣುಮಕ್ಕಳ ಸರ್ವತೋಮುಖ ಪ್ರಗತಿ ಹಾಗೂ ಅವರ ಸ್ಥಾನಮಾನ ಸುಧಾರಿಸಲು 2006–07ರಲ್ಲಿ ರೂಪಿಸಲಾಗಿದ್ದ ಈ ಯೋಜನೆಯಡಿ ತಾಲ್ಲೂಕಿನ 1,314 ಮಂದಿ ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ 1,160 ಮಂದಿಗೆ ಪರಿಪಕ್ವ ಮೊತ್ತ ಭಾರತೀಯ ಜೀವವಿಮಾ ನಿಗಮದಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಆಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಂದ್ರ ಬಾಬು ಪ್ರಜಾವಾಣಿಗೆ ತಿಳಿಸಿದರು. 

ನೋಂದಣಿದಾರರಿಗೆ 18 ವರ್ಷ ಪೂರ್ಣಗೊಂಡಿರಬೇಕು. ಮದುವೆ ಆಗಿರಬಾರದು, ವಿದ್ಯಾಭ್ಯಾಸ ಪಡೆದಿರಬೇಕು ಮತ್ತಿತರ ಷರತ್ತುಗಳನ್ನು ಪರಿಶೀಲಿಸಿ ಆನ್‌ಲೈನ್ ಮೂಲಕವೇ ನೋಂದಣಿದಾರರ ಅರ್ಜಿಗಳನ್ನು ಪರಿಶೀಲಿಸಿ ಭಾರತೀಯ ಜೀವವಿಮಾ ಕಚೇರಿಗೆ ಕಳುಹಿಸಲಾಗುತ್ತದೆ. ಜೀವವಿಮಾ ನಿಗಮವು ಪರಿಪಕ್ವ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತದೆ.

ADVERTISEMENT

ಯೋಜನೆ ಆರಂಭದ ವರ್ಷಗಳಲ್ಲಿ ಹೆಣ್ಣುಮಗುವಿನ ಹೆಸರಿನಲ್ಲಿ ₹10 ಸಾವಿರ ಹಣವನ್ನು ಎಲ್ಐಸಿಯಲ್ಲಿ ಠೇವಣಿ ಮಾಡಲಾಗುತ್ತಿತ್ತು. ಬಾಂಡ್ ಅವಧಿ ಪೂರ್ಣಗೊಂಡಾಗ ₹34 ಸಾವಿರ ದೊರೆಯುತ್ತದೆ. 2007–08ರಲ್ಲಿ 1,321 ಮಂದಿ ನೋಂದಣಿ ಮಾಡಿಸಿದ್ದು, 721 ಮಂದಿ ಫಲಾನುಭವಿಗಳ ಖಾತೆಗಳಿಗೆ ಪರಿಪಕ್ವ ಮೊತ್ತ ಜಮೆ ಆಗಿದೆ. ಉಳಿದವು ಪರಿಶೀಲನೆ ಹಂತದಲ್ಲಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.

ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಪ್ರಾರಂಭದಿಂದ 2019-20 ರವರೆಗೆ ಭಾರತೀಯ ಜೀವ ವಿಮಾ ನಿಗಮವು ಪಾಲುದಾರ ಹಣಕಾಸು ಸಂಸ್ಥೆಯಾಗಿತ್ತು. 2006ರ ಏಪ್ರಿಲ್ 1 ರಿಂದ 2008ರ ಜುಲೈ 31 ರವರೆಗಿನ ಅವಧಿಯಲ್ಲಿ ಜನಿಸಿ ನೋಂದಣಿಯಾದ ಹೆಣ್ಣು ಮಗುವಿಗೆ ₹10 ಸಾವಿರ ಠೇವಣಿ ಇಡಲಾಗುತ್ತಿತ್ತು. 2008ರ ಆ.1 ರ ನಂತರ ಯೋಜನೆಯನ್ನು ಇಬ್ಬರು ಮಕ್ಕಳಿಗೆ ವಿಸ್ತರಣೆಯಾಯಿತು. ನೋಂದಣಿಯಾದ ಮೊದಲ ಮಗುವಿಗೆ ₹19,300 ಮತ್ತು 2ನೇ ಮಗುವಿಗೆ ₹18,350 ಮೊತ್ತವನ್ನು ಭಾರತೀಯ ಜೀವ ವಿಮಾ ನಿಗಮದಲ್ಲಿ ಠೇವಣಿ ಮಾಡಲಾಗಿದೆ.

2020-21 ರಿಂದ ಈ ಯೋಜನೆಯನ್ನು ಅಂಚೆ ಇಲಾಖೆಯ ‘ಸುಕನ್ಯಾ ಸಮೃದ್ಧಿ’ ಯೋಜನೆಯೊಂದಿಗೆ ವಿಲೀನಗೊಳಿಸಿ ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆ ಎಂದು ಮರುವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ಪ್ರತಿವರ್ಷ ₹3 ಸಾವಿರ ಅನ್ನು 15 ವರ್ಷಗಳವರೆಗೆ ಜಮೆ ಮಾಡಲಾಗುತ್ತದೆ. ಖಾತೆ ತೆರೆದ 21 ವರ್ಷಗಳ ನಂತರ ಅಂದಾಜು ₹1.27 ಲಕ್ಷ ಮೊತ್ತ ದೊರೆಯುತ್ತದೆ.

ತಾಲ್ಲೂಕಿನಲ್ಲಿ ವರ್ಷಕ್ಕೆ ಸರಾಸರಿ 800 ಮಕ್ಕಳು ನೋಂದಣಿಯಾಗುತ್ತಿದ್ದಾರೆ. ಈ ಯೋಜನೆಯಲ್ಲಿ ಮಗುವಿನ ವಿದ್ಯಾಭ್ಯಾಸಕ್ಕೆ ಸಾಲ ಪಡೆಯಬಹುದು. ಉನ್ನತ ವಿದ್ಯಾಭ್ಯಾಸಕ್ಕಾಗಿ ಖಾತೆಯಲ್ಲಿರುವ ಶೇ.50 ರಷ್ಟು ಮೊತ್ತವನ್ನು ವಾಪಸ್ ಪಡೆಯಬಹುದು. ನೋಂದಣಿದಾರರು 18 ವರ್ಷ ಪೂರ್ಣಗೊಂಡ ನಂತರ ಅವಶ್ಯ ದಾಖಲೆಗಳನ್ನು ನೀಡಿ ಸ್ವತಃ ಖಾತೆ ನಿರ್ವಹಿಸಬಹುದು. ಖಾತೆದಾರರು 21 ವರ್ಷ ತುಂಬುವ ಮೊದಲೇ ಮದುವೆಯಾದರೆ 18 ವರ್ಷ ಪೂರ್ಣಗೊಂಡಿರುವುದನ್ನು ದೃಢೀಕರಿಸಿಕೊಂಡು ಅರ್ಜಿ ಸಲ್ಲಿಸುವ ಮೂಲಕ ಖಾತೆ ಮುಕ್ತಾಯಗೊಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.