ಚಿಕ್ಕಬಳ್ಳಾಪುರ: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಹೆಣ್ಣು ಮಕ್ಕಳ ಆರ್ಥಿಕ ಸಬಲೀಕರಣದ ಹಿನ್ನೆಲೆಯಲ್ಲಿ 2006–07ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾರಿಗೊಳಿಸಿದ್ದ ‘ಭಾಗ್ಯಲಕ್ಷ್ಮಿ’ ಯೋಜನೆಗೆ 18 ವರ್ಷ ತುಂಬಿದೆ. ಆದರೆ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆ ವರ್ಷದ ಫಲಾನುಭವಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗಳು ಪತ್ತೆಯಾಗಿಲ್ಲ. 2006ರ ಏ.1 ರಿಂದ 2007ರ ಮಾರ್ಚ್ 31ರ ಅವಧಿಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ನೀಡಿರುವ ಭಾಗ್ಯಲಕ್ಷ್ಮಿ ಬಾಂಡ್ಗಳ ಪೈಕಿ ಇಂತಿಷ್ಟು ಮಂದಿ ಫಲಾನುಭವಿಗಳು ಕಚೇರಿಗೆ ಬಂದು ಅರ್ಜಿಗಳನ್ನು ಸಲ್ಲಿಸಿ ಸೌಲಭ್ಯ ಪಡೆದಿದ್ದಾರೆ. ಉಳಿದ ಫಲಾನುಭವಿಗಳು ಸಂಪರ್ಕಕ್ಕೆ ದೊರೆತಿಲ್ಲ. ಆದ್ದರಿಂದ ಈ ಅವಧಿಯಲ್ಲಿ ಜನಿಸಿ ಭಾಗ್ಯಲಕ್ಷ್ಮಿ ಬಾಂಡ್ ಹೊಂದಿದ್ದು ಮೊತ್ತ ಪಡೆಯದ ಫಲಾನುಭವಿಗಳು ಕೂಡಲೇ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸಂಪರ್ಕಿಸಿ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆ ಹೊರಡಿಸುತ್ತಿದ್ದಾರೆ.
ಈ ಪ್ರಕಾರ ಜಿಲ್ಲೆಯಲ್ಲಿ 377 ‘ಭಾಗ್ಯಲಕ್ಷ್ಮಿ’ಯರ ಪತ್ತೆಗೆ ಹುಡುಕಾಟಕ್ಕೆ ಪ್ರಕಟಣೆ ಹೊರಡಿಸಲಾಗಿದೆ.
ಯೋಜನೆಗೆ ನೋಂದಣಿಯಾದ ಹೆಣ್ಣುಮಕ್ಕಳು ಕಡ್ಡಾಯವಾಗಿ 8ನೇ ತರಗತಿವರೆಗೆ ಶಿಕ್ಷಣ ಪಡೆದಿರಬೇಕು. ಬಾಲ ಕಾರ್ಮಿಕರಾಗಿರಬಾರದು, ಬಾಲ್ಯವಿವಾಹ ಆಗಿರಬಾರದು. ಪಡಿತರ ಕಾರ್ಡ್, ಜನನ ಪ್ರಮಾಣ ಪತ್ರ, 3ಕ್ಕಿಂತ ಹೆಚ್ಚು ಮಕ್ಕಳಿರುವುದು, ಮರಣ ಹೊಂದಿರುವವರು, ಎರಡು ಬಾರಿ ನೋಂದಾಣಿ ಆಗಿರುವವರು ಸೇರಿದಂತೆ ಇನ್ನಿತರೆ ಕಾರಣಗಳಿಂದ ಫಲಾನುಭವಿಗಳು ಬಾಂಡ್ ಪಡೆಯಲು ಸಾಧ್ಯವಾಗಿಲ್ಲ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 5,538 ಫಲಾನುಭವಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಸೂಪರ್ವೈಸರ್ ಹಂತದಲ್ಲಿ 4,804 ಅರ್ಜಿಗಳು ಮಾತ್ರ ಅರ್ಹವಾದವು. ಆ ನಂತರ ಸಿಡಿಪಿಒ, ಡಿಡಿ ಅವರಿಂದ 4,789 ಫಲಾನುಭವಿಗಳಿಗೆ ಅನುಮೋದನೆ ದೊರೆಯಿತು. ಈ ಪೈಕಿ 4,412 ಫಲಾನುಭವಿಗಳು ಬಾಂಡ್ ಪಡೆದಿದ್ದಾರೆ. ಉಳಿದ 377 ‘ಭಾಗ್ಯಲಕ್ಷ್ಮಿ’ಯರು ಪತ್ತೆಯಾಗಿಲ್ಲ.
2006–07ರಲ್ಲಿ ಯೋಜನೆಗೆ ನೋಂದಾಯಿಸಿದ ಹೆಣ್ಣುಮಕ್ಕಳಿಗೆ ಸದ್ಯ 18 ವರ್ಷ ತುಂಬಿದೆ. ದಾಖಲೆ ಪರಿಶೀಲನೆ ಬಳಿಕ ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಪರಿಪಕ್ವ ಮೊತ್ತ ಜಮೆ ಆಗುತ್ತಿದೆ. ಈ ಸಾಲಿನಲ್ಲಿ ನೋಂದಣಿ ಆದವರು ಹಣ ಜಮೆಗೆ ನೋಂದಾಯಿಸಲು ಅ.31 ಕೊನೆ ದಿನ.
ಕಾಲ ಕಾಲಕ್ಕೆ ಯೋಜನೆಯಲ್ಲಿ ಬದಲಾವಣೆ ಮಾಡಿ, ನೀಡುವ ಮೊತ್ತವನ್ನು ಏರಿಕೆ ಮಾಡಲಾಗಿದೆ. 2006–07ರಲ್ಲಿ ನೋಂದಣಿಯಾದವರಿಗೆ 18 ವರ್ಷ ಪೂರೈಸಿದ ನಂತರ ದೊರೆಯುವ ಮೊತ್ತ ₹32,351. ನಂತರ 2008ರ ಆ.1ರಿಂದ 2019–20ರ ಅವಧಿಯಲ್ಲಿ ನೋಂದಾಯಿಸಿದವರಿಗೆ ಅಂದಾಜು ಮೊತ್ತವನ್ನು ₹1 ಲಕ್ಷಕ್ಕೆ ಏರಿಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.