
ಗೌರಿಬಿದನೂರು: ನಗರದ ಶನಿಮಹಾತ್ಮ ದೇವಸ್ಥಾನ ಆವರಣದಲ್ಲಿ ಬಿಜೆಪಿ ವತಿಯಿಂದ ಕಾರ್ಯಕರ್ತರ ಸಭೆ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿಧರ್ ಮಾತನಾಡಿ, ‘ತಾಲ್ಲೂಕಿನಲ್ಲಿ ಕೆಲವರು ನಾವಿಲ್ಲದಿದ್ದರೆ ಪಕ್ಷವೇ ಇಲ್ಲ ಎನ್ನುವ ಭಾವನೆ ಹೊಂದಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಚಟ್ಟಕ್ಕೆ ಹೋಲಿಸಿದ್ದಾರೆ. ಆಪ್ತರು ನಿಮ್ಮ ವ್ಯಕ್ತಿತ್ವ ಹಾಳು ಮಾಡಲು ನಿಂತಿದ್ದಾರೆ. ನಿಮ್ಮಿಂದಲೇ ಬಿಜೆಪಿ ಇಬ್ಭಾಗವಾಗಿ ಈ ಸ್ಥಿತಿಗೆ ಬರಲು ಕಾರಣವಾಗಿದೆ. ನಾಯಕ ಉದ್ಭವ ಆಗುವುದಿಲ್ಲ. ಕಾರ್ಯಕರ್ತರು ಇಲ್ಲದಿದ್ದರೆ ನೀವು ಶೂನ್ಯ. ಕೆಲವು ನಿಮ್ಮ ಅವಿವೇಕಿ ಹಿಂಬಾಲಕರು ಮಾಡುತ್ತಿರುವ ಪಿತೂರಿಯಿಂದ ವೇದಿಕೆ ಮೇಲೆ ಬಂದು ನೀವು ಮಾತನಾಡುತ್ತೀರಿ. ಕೇವಲ ನಿಮ್ಮ ಶಕ್ತಿಯಿಂದ ಪಕ್ಷ ಇರುವುದಾದರೆ ಅವಕಾಶ ಕೊಟ್ಟಾಗ ಗೆದ್ದು ತೋರಿಸಬೇಕಿತ್ತು. ಬೇರೆಯವರಿಗೆ ಅವಕಾಶ ಕೊಟ್ಟಾಗ ಅವರನ್ನು ಗೆಲ್ಲಿಸಬೇಕಿತ್ತು’ ಎಂದು ರವಿನಾರಾಯಣ ರೆಡ್ಡಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ್ ರಾವ್ ಶೆಲ್ಕೆ ಮಾತನಾಡಿ, ಬಿಜೆಪಿ ಬ್ಯಾನರ್ ಹಾಕಿ ಸಭೆ ನಡೆಸಿದ್ದಾರೆ. ತಾಲ್ಲೂಕಿನಲ್ಲಿ ಅವರು ಬಿಜೆಪಿಗೆ ಸೇರ್ಪಡೆದಾಗಿನಿಂದ ಕೈಹಿಡಿದು ನಡೆಸಿದ್ದು ಪಕ್ಷ. ಆದರೆ, ಈಗ ಅವರಿಗೆ ಬೇಡವಾಗಿದೆ ಎಂದರು.
ಬಿಜೆಪಿ ಮುಖಂಡ ಮಾರ್ಕೆಟ್ ಮೋಹನ್ ಮಾತನಾಡಿ, ತಾಲ್ಲೂಕಿನಲ್ಲಿ ಯಾರು ಅಧ್ಯಕ್ಷ ಸ್ಥಾನಕ್ಕಾಗಲಿ, ಹುದ್ದೆಗಳಿಗಾಗಲಿ ಹೋರಾಟ ಮಾಡುತ್ತಿಲ್ಲ. ದೇಶಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಹರೀಶ್, ವೇಣು ಮಾಧವ್, ಸತೀಶ್, ರಾಮಕೃಷ್ಣ ರೆಡ್ಡಿ, ಮಧು ಸೂರ್ಯ ನಾರಾಯಣ ರೆಡ್ಡಿ, ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.