ADVERTISEMENT

ಮಾಜಿ ಶಾಸಕರ ವಿರುದ್ಧ ಪ್ರಕರಣ; ಕಾವೇರಿದ ಚರ್ಚೆ

ದಲಿತ ಸಮುದಾಯದಲ್ಲಿ ಆಂತರಿಕ ಒಗ್ಗಟ್ಟು; ‘ಬಿ’ ರಿಪೋರ್ಟ್ ಸಲ್ಲಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 10:43 IST
Last Updated 8 ಏಪ್ರಿಲ್ 2022, 10:43 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಚಿಕ್ಕಬಳ್ಳಾಪುರ ಕಾಂಗ್ರೆಸ್ ನಿಯೋಗ ಮೂವರು ಮಾಜಿ ಶಾಸಕರ ವಿರುದ್ಧ ಪ್ರಕರಣ ದಾಖಲು ವಿಚಾರವನ್ನು ಗಮನಕ್ಕೆ ತಂದಿತು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಚಿಕ್ಕಬಳ್ಳಾಪುರ ಕಾಂಗ್ರೆಸ್ ನಿಯೋಗ ಮೂವರು ಮಾಜಿ ಶಾಸಕರ ವಿರುದ್ಧ ಪ್ರಕರಣ ದಾಖಲು ವಿಚಾರವನ್ನು ಗಮನಕ್ಕೆ ತಂದಿತು   

ಚಿಕ್ಕಬಳ್ಳಾಪುರ: ದಲಿತ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ನ ಮಾಜಿ ಶಾಸಕರಾದಅನಸೂಯಮ್ಮ,ಶಿವಾನಂದ್, ಎಸ್‌.ಎಂ.ಮುನಿಯಪ್ಪ ಮತ್ತು ಜೆಡಿಎಸ್ ಹಾಗೂ ಪರಿಶಿಷ್ಟ ಸಮುದಾಯ ಮುಖಂಡ ಕೆ.ಸಿ.ರಾಜಾಕಾಂತ್ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ‘ಬಿ’ ರಿಪೋರ್ಟ್ ಸಲ್ಲಿಸಿದ್ದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಹಾಗೂ‍ ಪರಿಶಿಷ್ಟ ಸಮುದಾಯಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಜೈ ಭೀಮ್ ಹಾಸ್ಟೆಲ್ ಬಳಿ ಬಾಬೂ ಜಗಜೀವನ ರಾಂ ಜಯಂತಿ ದಿನ ನಡೆದ ಜಟಾಪಟಿಗೆ ಸಂಬಂಧಿಸಿದಂತೆ ಮಾಜಿ ಶಾಸಕರ ವಿರುದ್ಧನಗರ ಪೊಲೀಸ್ ಠಾಣೆ ಪಿಎಸ್‌ಐ ಹೊನ್ನೇಗೌಡ ಪ್ರಕರಣ ದಾಖಲಿಸಿದ್ದರು.ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ದಲಿತ ಸಮುದಾಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಕಾವು ತೀವ್ರವಾಗುತ್ತಿದೆ. ಈ ನಡುವೆ ಪೊಲೀಸರು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ. ಮಾಜಿ ಶಾಸಕರು ಹಾಗೂ ಮುಖಂಡರ ಜತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತುಕತೆ ಸಹ ನಡೆಸಿದ್ದಾರೆ. ತಪ್ಪು ತಿಳಿವಳಿಕೆಯಿಂದ ಈ ರೀತಿ ಆಗಿದೆ. ಬಿ ರಿಪೋರ್ಟ್ ಸಲ್ಲಿಸಿರುವುದಾಗಿ ಮುಖಂಡರಿಗೆ ಮಾಹಿತಿ ನೀಡಿದ್ದಾರೆ.

ಈ ನಡುವೆ ಕಾಂಗ್ರೆಸ್ ಪಕ್ಷದ ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ಸಹ ನೀಡಿದೆ.

ADVERTISEMENT

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವು ಈ ಹಿಂದೆ ಮೀಸಲು ಕ್ಷೇತ್ರವಾಗಿತ್ತು. ಕ್ಷೇತ್ರದಲ್ಲಿ ಗಣನೀಯವಾಗಿ ದಲಿತ ಮತದಾರರು ಇದ್ದಾರೆ. ಚುನಾವಣೆಗಳಲ್ಲಿ ಸೋಲು ಗೆಲುವನ್ನು ನಿರ್ಣಯಿಸುವ ಶಕ್ತಿ ದಲಿತ ಸಮುದಾಯಕ್ಕೆ ಇದೆ.ಅನಸೂಯಮ್ಮ, ಶಿವಾನಂದ್, ಎಸ್‌.ಎಂ.ಮುನಿಯಪ್ಪ ಮೀಸಲು ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಸಮುದಾಯದ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟಿಸಿದ ಕಾರಣದಿಂದ ಮಾಜಿ ಶಾಸಕರ ಮೇಲೆ ಪ್ರಕರಣ ದಾಖಲಾಗಿತ್ತು. ದಲಿತರು ಸೌಲಭ್ಯಕ್ಕಾಗಿ ಪ್ರತಿಭಟಿಸುವುದು ತಪ್ಪೇ? ಪ್ರಕರಣ ದಾಖಲಾಗಲು ರಾಜಕೀಯ ಹಿನ್ನೆಲೆ ಇದೆಯೇ? ರಾಜಕೀಯ ಉದ್ದೇಶದಿಂದಲೇ ಪ್ರಕರಣ ದಾಖಲಾಯಿತೇ? ಹೀಗೆ ನಾನಾ ರೀತಿಯ ಚರ್ಚೆಗಳು ದಲಿತ ಸಮುದಾಯದಲ್ಲಿ ಮೂಡಿತ್ತು. ಈ ವಿಚಾರ ಪಕ್ಷಾತೀತವಾಗಿ ದಲಿತರ ನಡುವೆ ಆಂತರಿಕವಾಗಿ ಒಗ್ಗಟ್ಟು ಮೂಡಿಸಲು ಹೆಜ್ಜೆ ಆಗುತ್ತಿತ್ತು.

ಏನಿದು ಪ್ರಕರಣ:ಜೈ ಭೀಮ್ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಹಮ್ಮಿಕೊಂಡಿ ಬಾಬೂ ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಕೆ ಸುಧಾಕರ್, ಎನ್. ನಾಗರಾಜು ಹಾಗೂ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮ ನಡೆಯುತ್ತಿರುವಾಗ ಮಾಜಿ ಶಾಸಕರು ಏಕಾಏಕಿ ಪ್ರತಿಭಟನೆ ಮಾಡಲು ಬಂದರು.ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬಂದ ಕಾರಣ ಇವರ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದು ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.

‘ಬೆದರಿಸುವ ಉದ್ದೇಶದಿಂದ ಪ್ರಕರಣ’

ಚಿಕ್ಕಬಳ್ಳಾಪುರದಲ್ಲಿ ಸರ್ವಾಧಿಕಾರಿ ವ್ಯವಸ್ಥೆ ಆರಂಭವಾಗಿದೆ. ವಾಕ್ ಸ್ವಾತಂತ್ರ್ಯ ಹತ್ತಿಕ್ಕುವ ಮತ್ತು ಬೆದರಿಸುವ ಉದ್ದೇಶದಿಂದ ಪ್ರಕರಣ ದಾಖಲಿಸಲಾಯಿತು’ ಎಂದು ದಲಿತ ಮುಖಂಡ ಹಾಗೂ ಜಿ.ಪಂ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್ ತಿಳಿಸಿದರು.

‘ಮಾಜಿ ಶಾಸಕರ ವಿರುದ್ಧವೇ ಪ್ರಕರಣ ದಾಖಲಿಸಿದರೆ ಸಾಮಾನ್ಯ ಜನರು ಪ್ರತಿಭಟಿಸಲು ಸಾಧ್ಯವೇ? ಪ್ರತಿಭಟನೆ, ಹೋರಾಟಗಳನ್ನು ಹತ್ತಿಕ್ಕಬೇಕು. ಮತ್ತೆ ಯಾರೂ ಪ್ರತಿಭಟನೆಗೆ ಮುಂದಾಗಬಾರದು ಎನ್ನುವ ಉದ್ದೇಶದಿಂದ ಪ್ರಕರಣ ದಾಖಲಿಸಿದರು’ ಎಂದರು.

ಸಮುದಾಯದ ಅಭಿವೃದ್ಧಿ ವಿಚಾರದಲ್ಲಿ ನಾವು ಪಕ್ಷಾತೀತವಾಗಿ ಒಗ್ಗೂಡುತ್ತೇವೆ. ಐದು ವರ್ಷಗಳ ಹಿಂದೆಯೇ ಬಾಬೂ ಜನಜೀವನ ರಾಂ ಭವನ ನಿರ್ಮಾಣ ಆಗಬೇಕಿತ್ತು. ವಿವಿಧ ಅಭಿವೃದ್ಧಿ ನಿಗಮಗಳಡಿ ಪರಿಶಿಷ್ಟರಿಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಇದನ್ನು ಕೇಳಿದ್ದು ತಪ್ಪೇ ಎಂದರು.

‘ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಜವಾಬ್ದಾರಿ. ಆದರೆ ನಮ್ಮ ಸೌಲಭ್ಯಕ್ಕಾಗಿ ಆಗ್ರಹಿಸಿದರೆ ಪ್ರಕರಣ ದಾಖಲಿಸುವುದು ಸರಿಯಲ್ಲ. ಎಸ್‌ಪಿ ಅವರು ನಮ್ಮನ್ನು ಕರೆಸಿ ಮಾತನಾಡಿದರು.ತಪ್ಪು ತಿಳಿವಳಿಕೆಯಿಂದ ಆಗಿದೆ. ಬಿ ರಿಪೋರ್ಟ್ ಹಾಕುತ್ತಿದ್ದೇವೆ ಎಂದು ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಸಮುದಾಯದ ಸಭೆ ಕರೆಯುತ್ತೇವೆ. ಅಲ್ಲಿ ಚರ್ಚಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.