ರೈತರ ಹೊಲಗಳಿಗೆ ರಾಸಾಯನಿಕ ತ್ಯಾಜ್ಯ ಹರಿಸಿರುವ ದೃಶ್ಯ
ಗೌರಿಬಿದನೂರು: ರೈತರ ಹೊಲಗಳಿಗೆ, ಕೆರೆಗಳಿಗೆ ಕಾರ್ಖಾನೆ ತ್ಯಾಜ್ಯವನ್ನು ಬಿಡುವ ಕೃತ್ಯಗಳು ತಾಲ್ಲೂಕಿನಲ್ಲಿ ಹೆಚ್ಚುತ್ತಿವೆ.
ಇತ್ತೀಚೆಗೆ ತಾಲ್ಲೂಕಿನ ಉತ್ತರ ಪಿನಾಕಿನಿ ನದಿಗೆ ಕೈಗಾರಿಕಾ ತ್ಯಾಜ್ಯ ಬಿಡಲಾಗಿತ್ತು. ಈಗ ಮತ್ತೆ ಮರಳೂರು ಸಮೀಪದ ರೈತರ ಹೊಲಗಳಿಗೆ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ಹರಿಸಲಾಗಿದೆ.
ನಗರದ ಹೊರ ವಲಯದಲ್ಲಿ ಹದಿನೈದು ವರ್ಷಗಳ ಹಿಂದೆ ನಿಷ್ಕ್ರಿಯವಾಗಿರುವ ಗೌರಿ ಡಿಸ್ಟಿಲರಿ ಕಾರ್ಖಾನೆಯವರು ಹೊಂಡಗಳಲ್ಲಿ ಶೇಖರಣೆ ಮಾಡಿದ್ದ ಮಲಾಸಿಸ್ ಅನ್ನು ಅಕ್ರಮವಾಗಿ ಮರಳೂರು ಕೆರೆಗೆ ಹರಿಯಬಿಟ್ಟಿದ್ದಾರೆ.
ಕೆರೆಗೆ ಕೆರೆ ಸುತ್ತಲಿನ ಹೊಲಗಳಲ್ಲಿಯೂ ಈ ತ್ಯಾಜ್ಯ ಹರಿದಿದೆ. ಬೆಳೆಗಳಿಗೆ, ಜಲಚರಗಳಿಗೆ ಹಾಗೂ ದನಕರುಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಕಾರ್ಖಾನೆ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕಾದಲವೇಣಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆಯೂ ಸಹ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳು ರಾಸಾಯನಿಕ ತ್ಯಾಜ್ಯವನ್ನು ಜನ ನಿಬಿಡ ಪ್ರದೇಶಗಳಲ್ಲಿ ಸುರಿದಿವೆ.
ಕೈಗಾರಿಕೆಗಳ ತ್ಯಾಜ್ಯವನ್ನು ರಾತ್ರೋ ರಾತ್ರಿ ತಂದು ಹೊಲಗಳು, ರಸ್ತೆಗಳ ಬದಿ, ಜಲಮೂಲಗಳ ಸಮೀಪ ಸುರಿಯಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.