
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ; ಕಣದಲ್ಲಿ 28 ಅಭ್ಯರ್ಥಿಗಳು
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಚುನಾವಣಾ ಕಣ ನಿಚ್ಚಳವಾಗಿದೆ. 13 ಸ್ಥಾನಗಳಿಗೆ ಒಟ್ಟು 28 ಅಭ್ಯರ್ಥಿಗಳು ಸೆಣಸಾಟ ನಡೆಸುವರು.
ಶನಿವಾರ ನಾಮಪತ್ರ ವಾಪಸ್ಗೆ ಅಂತಿಮ ದಿನವಾಗಿತ್ತು. 14 ಮಂದಿ ತಮ್ಮ ಉಮೇದುವಾರಿಕೆ ವಾಪಸ್ ಪಡೆದರು. ಒಟ್ಟು 43 ಮಂದಿ ನಾಮಪತ್ರ ಸಲ್ಲಿಸಿದ್ದು ಈ ಪೈಕಿ ಚೇಳೂರು ಕ್ಷೇತ್ರದ ಎನ್.ವಿ.ಶ್ರೀರಾಮರೆಡ್ಡಿ ನಾಮಪತ್ರ ತಿರಸ್ಕೃತವಾಗಿತ್ತು.
ಮಂಚೇನಹಳ್ಳಿ ಮತ್ತು ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಲ್ಲಿ ಮಾತ್ರ ಮೂವರು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಉಳಿದ 11 ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳ ನಡುವೆ ಸೆಣಸಾಟವಿದೆ.
ಈ ಮೂಲಕ ಜಿಲ್ಲೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ಎನ್ಡಿಎ ಬೆಂಬಲಿತರು ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ಸೋಲು ಗೆಲುವಿಗೆ ಪೈಪೋಟಿ ನಡೆಯುವುದು ನಿಚ್ಚಳವಾಗಿದೆ.
ತೀವ್ರ ಚರ್ಚೆಗೆ ಕಾರಣವಾಗಿದ್ದ ಚಿಕ್ಕಬಳ್ಳಾಪುರ (ನಂದಿ) ಕ್ಷೇತ್ರದಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗುದ್ದ ಶಿವಾನಂದ್ ನಾಮಪತ್ರ ವಾಪಸ್ ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್ ಮುಖಂಡರಾದ ಎನ್.ಸಿ.ವೆಂಕಟೇಶ್ ಮತ್ತು ಯಲುವಳ್ಳಿ ಎನ್.ರಮೇಶ್ ನಡುವೆ ಸ್ಪರ್ಧೆ ಇದೆ. ಈ ಮೂಲಕ ಒಂದೇ ಪಕ್ಷದಲ್ಲಿಯೇ ಬಣಗಳಾಗಿ ಸೆಣಸಾಟ ನಡೆಯುವುದು ನಿಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.