
ಚಿಂತಾಮಣಿ: ನಗರದ ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಲ್ಲಿ ಆರೋಗ್ಯ ಮತ್ತು ಪೊಲೀಸ್ ಇಲಾಖೆಯು, ಸಿದ್ದಾರ್ಥ ಯುವ ಕ್ರೀಡಾ ಸಾಂಸ್ಕೃತಿಕ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಆರೋಗ್ಯ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.
ಪೊಲೀಸ್ ಅಧಿಕಾರಿ ಪ್ರಕಾಶ್ ಮಾತನಾಡಿ, ಆರೋಗ್ಯದ ಜೊತೆಗೆ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಬೇಕು. ವಾಹನಗಳನ್ನು ವೇಗವಾಗಿ ಚಾಲನೆ ಮಾಡದೆ ನಿಧಾನವಾಗಿ ಚಲಿಸುತ್ತಾ ಕುಟುಂಬದ ಒಳಿತಿಗಾಗಿ ಬಾಳಬೇಕು. ಕುಟುಂಬದ ಸದಸ್ಯರಿಗೆ ನೋವಾಗದಂತೆ, ಪೊಲೀಸ್ ಇಲಾಖೆ ಸೂಚನೆ ಮತ್ತು ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ಇಲಾಖೆಯ ಅಧಿಕಾರಿ ಮಳ್ಳೂರಪ್ಪ ಮಾತನಾಡಿ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅತಿ ವೇಗವಾಗಿ ವಾಹನವನ್ನು ಚಲನೆ ಮಾಡುವಂತಹ ಸುಮಾರು ಜನ ಯುವಕರು ಸಾವಿಗೀಡಾಗಿದ್ದಾರೆ. ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ಯುವಜನರು ಜವಾಬ್ದಾರಿ ಅರಿತು ವಾಹನ ಚಾಲನೆ ಮಾಡಬೇಕು ಎಂದರು.
ಆರೋಗ್ಯ ಇಲಾಖೆ ಕಾರ್ಯಕ್ರಮಗಳು ಕಡುಬಡವರಿಗೆ ಸಿಗಬೇಕು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಸಿಗುವ ಹಲವಾರು ಕಾರ್ಯಕ್ರಮಗಳನ್ನು ಜನರು ಉಪಯೋಗಿಸಿಕೊಂಡು ಆರೋಗ್ಯದಿಂದ ಬಾಳಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಧ್ಯೇಯವನ್ನು ಮರೆಯಬಾರದು ಎಂದು ತಿಳಿಸಿದರು.
ಸಿದ್ದಾರ್ಥ ಯುವ ಕ್ರೀಡಾ ಸಂಘದ ಮಂಜುನಾಥ್, ಪೊಲೀಸ್ ಇಲಾಖೆಯ ವೇಣುಗೋಪಾಲ್ ಹಾಗೂ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.