
ಚಿಂತಾಮಣಿ: ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಪಡಿತರ ಚೀಟಿ ರದ್ದುಪಡಿಸುವ ರಾಜ್ಯ ಸರ್ಕಾರದ ಆದೇಶ ಖಂಡಿಸಿ ಜಲಗಾರರ ಸಂಘದ ನೇತೃತ್ವದಲ್ಲಿ ಸೋಮವಾರ ತಾಲ್ಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ‘ಗ್ರಾಮ ಪಂಚಾಯಿತಿಗಳಲ್ಲಿ ಜಲಗಾರರಾಗಿ ಹಾಗೂ ಇತರೆ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ಕೆಳ ಹಂತದ ನೌಕರರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಸರ್ಕಾರಿ ನೌಕರರಿಗೆ ದೊರೆಯುವ ಯಾವುದೇ ಸೌಲಭ್ಯ ನಮಗೆ ದೊರೆಯುತ್ತಿಲ್ಲ. ಆದರೂ ಸರ್ಕಾರ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಜಲಗಾರರ ಸಂಘದ ವತಿಯಿಂದ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ’ ಎಂದರು.
‘ಜಲಗಾರರು ಹಾಗೂ ಇತರೆ ಸಿಬ್ಬಂದಿಗಳು ಕಾರ್ಮಿಕರಾಗಿರುವುದರಿಂದ ಕನಿಷ್ಠ ವೇತನ ದರ ಪರಿಷ್ಕೃತಗೊಳ್ಳುತ್ತಿದೆ. ಕನಿಷ್ಠ ವೇತನ ಬದಲಾವಣೆ ಹೊರತುಪಡಿಸಿ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಕೇಲವ ಕನಿಷ್ಠ ವೇತನದ ಬದಲಾವಣೆಯ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಹೊರಟಿರುವುದು ಅನ್ಯಾಯವಾಗಿದೆ. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಬಿಪಿಎಲ್ ರದ್ದುಪಡಿಸುತ್ತಿರುವುದರಿಂದ ಜಲಗಾರರಿಗೆ ತೊಂದರೆ ಆಗುತ್ತದೆ’ ಎಂದು ತಿಳಿಸಿದರು.
‘ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಲಗಾರರು ಮತ್ತಿತರ ಸಿಬ್ಬಂದಿಯ ಬಿಪಿಎಲ್ ಪಡಿತರ ಚೀಟಿಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕು. ಸರ್ಕಾರಿ ನೌಕರರೆಂದು ಪರಿಗಣಿಸಿ ಅವರಿಗೆ ಸಿಗುತ್ತಿರುವ ಎಲ್ಲ ಸೌಲಭ್ಯಗಳನ್ನು ಮಂಜೂರು ಮಾಡಿದ ನಂತರ ಬೇಕಾದರೆ ಹಿಂತೆಗೆದುಕೊಳ್ಳಲಿ. ಯಾವುದೇ ಸೌಲಭ್ಯ ನೀಡದೆ ಬಿಪಿಎಲ್ ಕಾರ್ಡ್ ರದ್ದುಪಡಿಸಿದರೆ ಉಗ್ರಹೋರಾಟ ರೂಪಿಸಲಾಗುವುದು’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರವಾಗಿ ವ್ಯವಸ್ಥಾಪಕ ರವಿ ಮನವಿ ಸ್ವೀಕರಿಸಿದರು.
ಸಂಘದ ಪದಾಧಿಕಾರಿ ರಮೇಶ್, ಶ್ರೀನಿವಾಸ್, ರಾಜಶೇಖರ್, ಶಿವಕುಮಾರ್, ವೆಂಕಟೇಶ್, ವಿ.ರವಿ, ಆಂಜಪ್ಪ, ನರಸಿಂಹಪ್ಪ, ಎಂ.ರಾಜಾಸಿಂಗ್, ರವೀಂದ್ರ, ಚೌಡರೆಡ್ಡಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.