
ಚಿಂತಾಮಣಿ: ರಾಷ್ಟ್ರೀಯ ಜಂತುಹುಳ ನಿವಾರಣಾ ದಿನದ ಅಂಗವಾಗಿ ಮಂಗಳವಾರ ನಗರದ ಟ್ಯಾಂಕ್ ಬಂಡ್ ರಸ್ತೆಯ ವಾಣಿ ವಿದ್ಯಾ ಸಂಸ್ಥೆಯಲ್ಲಿ ತಾಲ್ಲೂಕು ಆರೋಗ್ಯ ಇಲಾಖೆಯು ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ತಾಲ್ಲೂಕಿನಲ್ಲಿ 76,388 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಿಸುವ ಗುರಿ ಇದೆ ಎಂದು ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಸಂತೋಷಬಾಬು ತಿಳಿಸಿದರು.
ಪ್ರತಿ ವರ್ಷ ಫೆಬ್ರುವರಿ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಒಂದು ವರ್ಷದಿಂದ 19 ವರ್ಷದವರೆಗಿನವರಿಗೆ ಜಂತುಹುಳ ನಿವಾರಣಾ ಮಾತ್ರೆ (ಆಲ್ಬೆಂಡೊಜೊಲ್ ಮಾತ್ರೆ) ವಿತರಿಸಲಾಗುವುದು. ಎರಡು ಬಾರಿ ಮಕ್ಕಳಿಗೆ ಮಾತ್ರೆ ನುಂಗಿಸಿ ಮಕ್ಕಳಲ್ಲಿ ರಕ್ತಹೀನತೆ ಮತ್ತು ಇದರಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುವ ಗುರಿ ಇದೆ ಎಂದು ಜಿಲ್ಲಾ ಆರ್ಸಿಎಚ್ಒ ಅಧಿಕಾರಿ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ಎಸ್. ರಾಮಚಂದ್ರಾರೆಡ್ಡಿ ಮಾತನಾಡಿ, ತಾಲ್ಲೂಕಿನಲ್ಲಿ 76,388 ಮಕ್ಕಳಿಗೆ ಜಂತುಹುಳ ನಿವಾರಣೆ ಮಾತ್ರೆ ವಿತರಿಸಲಾಗುತ್ತದೆ. ಬಹಿರ್ದೆಸೆ ಮಾಡುವಾಗ, ಬರೀ ಕಾಲಲ್ಲಿ ನಡೆಯುವುದು, ಸರಿಯಾಗಿ ಕೈ ತೊಳೆಯದ ಸಂದರ್ಭಗಳಲ್ಲಿ ಜಂತುಹುಳ ಮಕ್ಕಳ ಹೊಟ್ಟೆ ಸೇರಿ ಬೆಳವಣಿಗೆ ಕುಂಠಿತಗೊಳ್ಳುವಂತೆ ಮಾಡುತ್ತದೆ. ರಕ್ತಹೀನತೆ ಉಂಟುಮಾಡುತ್ತವೆ ಎಂದು ತಿಳಿಸಿದರು.
ಮಕ್ಕಳು ಚಪ್ಪಲಿ ಹಾಕಿಕೊಂಡು ನಡೆಯುವುದು ಹಾಗೂ ಸ್ವಚ್ಛವಾಗಿ ಕೈ ತೊಳೆಯುವ ಮುಖಾಂತರ ಜಂತುಹುಳ ತಡೆಗಟ್ಟಬಹುದು. ಎಲ್ಲ ಶಾಲೆ /ಕಾಲೇಜುಗಳಲ್ಲಿ ನೋಡಲ್ ಶಿಕ್ಷಕರು /ಪ್ರಾಧ್ಯಾಪಕರು ಮಕ್ಕಳಿಗೆ ಜಂತುಹುಳ ನಿವಾರಣೆ ಮಾತ್ರೆ ನೀಡುತ್ತಾರೆ. ಗ್ರಾಮಗಳಲ್ಲಿನ ಮಕ್ಕಳಿಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಜಂತುಹುಳ ನಿವಾರಣೆ ಮಾತ್ರೆ ನೀಡುತ್ತಾರೆ ಎಂದು ಹೇಳಿದರು.
ಡಾಕ್ಟರ್ ಬಸವ ಮಂಜೇಶ್ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವಮಂಜೇಶ್ ಮಕ್ಕಳ ವೈಯಕ್ತಿಕ ಸ್ವಚ್ಛತೆ ಬಗ್ಗೆ ಹಾಗೂ ಸೇವಿಸುವ ಪೌಷ್ಟಿಕ ಆಹಾರದ ಕುರಿತು ಮಾಹಿತಿ ನೀಡಿದರು.
ಶಾಲೆ ಮುಖ್ಯೋಪಾಧ್ಯಾಯ ದೇವರಾಜು, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್ ರೆಡ್ಡಿ ಮಾತನಾಡಿದರು.
ತಾಲ್ಲೂಕು ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸರಸ್ವತಮ್ಮ, ನಗರ ಆರೋಗ್ಯ ಕೇಂದ್ರದ ಎಲ್ಲಾ ಪ್ರಾಥಮಿಕ ಆರೋಗ್ಯ ಸುರಕ್ಷಿತ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.