ADVERTISEMENT

ಚಿಂತಾಮಣಿ | ಬೆಲೆ ಕುಸಿತ; ತೋಟಗಳಲ್ಲೇ ಕೊಳೆಯುತ್ತಿದೆ ತೋತಾಪುರಿ ಮಾವು

ಮಾವಿಗೆ ಬೆಂಬಲ ಬೆಲೆ ಘೋಷಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:22 IST
Last Updated 23 ಜೂನ್ 2025, 14:22 IST
.
.   

ಚಿಂತಾಮಣಿ: ಮಾವಿನ ಬೆಲೆ ತೀವ್ರ ಕುಸಿದಿದ್ದು, ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಎಂದು ಮಾವು ಬೆಳೆಗಾರರ ಸಂಘ ಆಗ್ರಹಿಸಿದೆ.

ಸುದ್ದಿಗಾರರಿಗೆ ಸೋಮವಾರ ಮಾತನಾಡಿದ ಸಂಘದ ತಾಲ್ಲೂಕು ಕಾರ್ಯದರ್ಶಿ ಲಕ್ಷ್ಮೀನಾರಾಯಣರೆಡ್ಡಿ, ಮಾವಿನ ಬೆಲೆ ತೀವ್ರ ಕುಸಿದಿದ್ದು, ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ತೋತಾಪುರಿ ತಳಿಯನ್ನು ಕೇಳುವವರೇ ಇಲ್ಲ. ತೋತಾಪುರಿ ತಳಿಯ ಕಾಯಿ ತೋಟಗಳಲ್ಲೇ ಕೊಳೆಯುತ್ತಿದೆ. ಚಿಂತಾಮಣಿ ಮತ್ತು ಶ್ರೀನಿವಾಸಪುರ ತಾಲ್ಲೂಕುಗಳಲ್ಲಿ ಮಾವು ಬೆಳೆಗಾರರು ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ ಬೆಂಬಲ ಬೆಲೆಗೆ ಒತ್ತಾಯಪಡಿಸಿವೆ ಎಂದ ತಿಳಿಸಿದರು.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆ.ಜಿ.ಗೆ ತಲಾ 2 ರೂ ನಂತೆ ಬೆಂಬಲ ಬೆಲೆ ನೀಡಲು ಒಪ್ಪಿಕೊಂಡಿವೆ ಎಂಬ ವರದಿಗಳು ಬರುತ್ತಿವೆ. ಸರ್ಕಾರಿ ಆದೇಶವಾಗಿ ಬೇಗ ಕಾರ್ಯರೂಪಕ್ಕೆ ಬರಬೇಕು ಎಂದು ಒತ್ತಾಯಿಸಿದರು.

ADVERTISEMENT

ಸರ್ಕಾರ ಅತ್ತೂ–ಸುರಿದು ಕೊಯ್ಲು ಮುಗಿದ ನಂತರ ತೀರ್ಮಾನ ಕೈಗೊಂಡರೆ ಬೆಳೆಗಾರರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ದಳ್ಳಾಳಿಗಳು ಹುಟ್ಟಿಕೊಂಡು ಅವ್ಯವಹಾರಗಳಿಗೆ ದಾರಿಯಾಗುತ್ತದೆ. ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಟೊಮೆಟೊಗೆ ಬೆಂಬಲ ಬೆಲೆ ಘೋಷನೆ ಮಾಡಿದ್ದರು. ರೈತರ ಹೆಸರಿನಲ್ಲಿ ದಳ್ಳಾಳಿಗಳು ಹಣ ಮಾಡಿಕೊಂಡರು. ಹಾಗಾಗದಂತೆ ಕೂಡಲೇ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಗೌರಿಬಿದನೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಗೆ ಜಿಲ್ಲಾ ಉತ್ಸುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಬೆಂಬಲ ಬೆಲೆಗಾಗಿ ಮನವಿ ಸಲ್ಲಿಸಿದ್ದರು. ಸಚಿವ ಸಂಪುಟದ ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ, ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತಿತರರು ಒತ್ತಾಯಿಸಿದ್ದರೂ ಬೆಂಬಲ ಬೆಲೆಯ ಕುರಿತು ಖಚಿತ ತೀರ್ಮಾನವಾಗಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.

ಕಣ್ಣೋರೆಸುವ ತಂತ್ರ

ಸರ್ಕಾರ ಕೇವಲ ಆಂಧ್ರಪ್ರದೇಶದ ಸರ್ಕಾರಕ್ಕೆ ಹಾಗೂ ಚಿತ್ತೂರು ಜಿಲ್ಲಾಧಿಕಾರಿಗೆ ಪತ್ರ ಬರೆದು ಕೈತೊಳೆದುಕೊಂಡಿದೆ. ಇದೊಂದು ಕಣ್ಣೋರೆಸುವ ತಂತ್ರವಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಉತ್ಸುವಾರಿ ಸಚಿವರು ಎಲ್ಲ ಶಾಸಕರು ಹಾಗೂ ಸಂಸದರು ಸಹ ಸರ್ಕಾರದ ಮೇಲೆ ಒತ್ತಡ ತರಬೇಕು. ಮಾವಿನ ಕೊಯ್ಲು ಆರಂಭವಾಗಿದ್ದು ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಮಾವು ಬೆಳೆಗಾರರ ಸಂಘ ಒತ್ತಾಯಿಸಿದೆ. ಸಂಸ್ಕರಣ ಘಟಕ ಸ್ಥಾಪಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾವು ಮತ್ತು ಟೊಮೆಟೊ ಸಂಸ್ಕರಣ ಘಟಕಗಳನ್ನು ಹೆಚ್ಚಾಗಿ ಸ್ಥಾಪಿಸಬೇಕು. ನೆರೆಯ ಚಿತ್ತೂರು ಜಿಲ್ಲೆಯಲ್ಲಿ ಹೆಚ್ಚಿನ ಜ್ಯೂಸ್‌ ಕಾರ್ಖಾನೆಗಳಿವೆ. ಅದೇ ರೀತಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಸ್ಥಾಪಿಸಲು ಕ್ರಮಕೈಗೊಳ್ಳಬೇಕು. ಮಾವಿನ ಪಲ್ಪ್‌ ಮೇಲೆ ಕೇಂದ್ರ ಸರ್ಕಾರ ಶೇ.12 ರಷ್ಟು ಜಿ.ಎಸ್‌.ಟಿ ವಿಧಿಸಿರುವುದು ಮಾವಿನ ಬೆಲೆ ಇಳಿಕೆಗೆ ಕಾರಣವಾಗಿದೆ. ಜಿ.ಎಸ್‌.ಟಿ ಯನ್ನು ಶೇ.5ಕ್ಕೆ ಇಳಿಸಬೇಕು . ಸಂಸತ್‌ ಸದಸ್ಯರು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಸಂಘ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.