
ಚಿಂತಾಮಣಿ: ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಹಳ್ಳಿ ಗ್ರಾಮದಲ್ಲಿ ಶನಿವಾರ ತಿಪ್ಪೆ ಹಾಕುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟವಾಗಿದೆ. ಈ ಘಟನೆಯಲ್ಲಿ 8 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮಾಂಜಪ್ಪ, ನಾರಾಯಣಪ್ಪ, ವೆಂಕಟಪ್ಪ, ವೆಂಕಟರಾಜು, ನಾಗಮ್ಮ, ಗೋವಿಂದಪ್ಪ, ಲಕ್ಷ್ಮಮ್ಮ, ಹರೀಶ್ ಗಾಯಗೊಂಡವರು.
ಗ್ರಾಮದ ಅಖಿಲಮ್ಮ ತಮ್ಮ ಮನೆ ಸಮೀಪ ಇರುವ ತಿಪ್ಪೆ ಗುಂಡಿಯಲ್ಲಿ ಕಸ ಎಸೆಯಲು ಹೋಗಿದ್ದರು. ಈ ವೇಳೆ ಸಮೀಪವಿರುವ ಮನೆಯ ವೆಂಕಟರವಣಮ್ಮ ನಡುವೆ ಮಾತಿಗೆ ಮಾತು ನಡೆದು ಗಲಾಟೆಯಾಗಿದೆ. ನಂತರ ಇಬ್ಬರ ಪರವಾಗಿ ಅವರವರ ಕುಟುಂಬಗಳ ಸದಸ್ಯರು ಸೇರಿಕೊಂಡಿದ್ದು, ಮಾತಿನ ಚಕಮಕಿಯು ಕೈಕೈ ಮಿಲಾಯಿಸಿಕೊಂಡಿದ್ದಾರೆ.
ಆಸ್ಪತ್ರೆಯ ಎದುರು ರಾಮಾಂಜಪ್ಪ ಅವರ ಕಾರಿನ ಮೇಲೆ ಎದುರಾಳಿ ಕುಟುಂಬ ದಾಳಿ ಮಾಡಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮಾಹಿತಿ ಪಡೆದ ಗ್ರಾಮಾಂತರ ಠಾಣೆ ಪೊಲೀಸರು, ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.