ADVERTISEMENT

ಗೌರಿಬಿದನೂರು ನಗರಸಭೆ: ₹34 ಲಕ್ಷ ಉಳಿತಾಯ ಬಜೆಟ್

ಬೀದಿಬದಿ ವ್ಯಾಪಾರಿಗಳ ಪರ ಧ್ವನಿಯೆತ್ತಿದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 5:22 IST
Last Updated 18 ಮಾರ್ಚ್ 2023, 5:22 IST
ಸಭೆಯಲ್ಲಿ ‌ಭಾಗವಹಿಸಿದ್ದ ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರು
ಸಭೆಯಲ್ಲಿ ‌ಭಾಗವಹಿಸಿದ್ದ ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರು   

ಗೌರಿಬಿದನೂರು: ಇಲ್ಲಿನ ನಗರಸಭೆಯಲ್ಲಿ ಅಧ್ಯಕ್ಷೆ ಎಸ್. ರೂಪಾ ಅನಂತರಾಜು ಅವರ ಅಧ್ಯಕ್ಷತೆಯಲ್ಲಿ 2023-24ನೇ ಸಾಲಿನ ಆಯವ್ಯಯದ ಸಭೆ ಗುರುವಾರ ನಡೆಯಿತು.

ಬಜೆಟ್ ಸಭೆಗೂ ಮುನ್ನ ತ್ಯಾಜ್ಯ ನಿರ್ವಹಣೆ ಸಂಯೋಜಕಿ ಕೀರ್ತಿ ಅವರು ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯ ಮತ್ತು ಅದನ್ನು ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಿಸುವ ಮೂಲಕ ನಗರಸಭೆಗೆ ಲಾಭ ತರುವ ಬಗ್ಗೆ ಪಿಪಿಟಿ ಪ್ರದರ್ಶನ
ಮಾಡಿದರು.

ಅಧ್ಯಕ್ಷೆ ಎಸ್.ರೂಪ ಅನಂತರಾಜು ಮಾತನಾಡಿ, ‘ನಗರದ 31 ವಾರ್ಡ್‌ಗಳಲ್ಲಿ ಮೂಲ ಸೌಕರ್ಯ ಒದಗಿಸಲು 2023-24ನೇ ಸಾಲಿಗೆ ಉತ್ತಮ ಬಜೆಟ್ ಅನ್ನು ಮಂಡಿಸಲಾಗಿದೆ. ಒಟ್ಟು ಅಂದಾಜು ಬಜೆಟ್‌ನಲ್ಲಿ ₹14 ಕೋಟಿಗೆ ಅನುಮೋದನೆ ದೊರೆತಿದೆ. ಮುಂದಿನ ವರ್ಷದಲ್ಲಿ ಒಟ್ಟಾರೆ ಆದಾಯ 43.57 ಕೋಟಿ ನಿರೀಕ್ಷಿಸಲಾಗಿದ್ದು, ಇದರಲ್ಲಿ ₹43.23 ಕೋಟಿ ವೆಚ್ಚವಾಗುವ ಅಂದಾಜು ಇದೆ. ಇದರಿಂದ ₹34.07 ಲಕ್ಷ ಉಳಿತಾಯವಾಗಲಿದೆ’ ಎಂದರು.

ADVERTISEMENT

ಸದಸ್ಯ ಆರ್.ಪಿ. ಗೋಪಿನಾಥ್ ಮಾತನಾಡಿ, ‘ನಗರದಲ್ಲಿ ಇತ್ತೀಚೆಗೆ ನಗರಸಭೆ ಅಧಿಕಾರಿಗಳು ನಡೆಸುತ್ತಿರುವ ಪಾದಚಾರಿ ಒತ್ತುವರಿ ತೆರವಿನಿಂದ ಬೀದಿಬದಿ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ. ದಶಕಗಳಿಂದಲೂ ಬೀದಿಬದಿ ವ್ಯಾಪಾರ ಮಾಡಿಕೊಂಡು ಇರುವವರಿಗೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ನಗರಸಭೆ ವ್ಯಾಪ್ತಿಯಲ್ಲಿನ ಅನವಶ್ಯಕ ಪ್ಲಾಸ್ಟಿಕ್ ವಸ್ತುಗಳನ್ನು ತೆರವುಗೊಳಿಸಿ ನಗರದ ಸ್ವಚ್ಛತೆಗೆ ಆದ್ಯತೆ ನೀಡಲು ಅಧಿಕಾರಿಗಳು ಮುಂದಾಗಬೇಕು. ಇದಕ್ಕೆ ಎಲ್ಲ ಸದಸ್ಯರು ಪೂರಕ ಸಹಕಾರ ನೀಡಲು ಬದ್ಧರಾಗಿದ್ದೇವೆ ಎಂದು ಸದಸ್ಯ ಎ. ಮೋಹನ್ ತಿಳಿಸಿದರು.

ಸಭೆಯಲ್ಲಿ ಪೌರಾಯುಕ್ತೆ ಡಿ.ಎಂ.ಗೀತಾ, ಉಪಾಧ್ಯಕ್ಷೆ ಭಾಗ್ಯಮ್ಮ, ಲೆಕ್ಕಾಧಿಕಾರಿ ಗೋವಿಂದಪ್ಪ, ಅಧಿಕಾರಿಗಳಾದ ರಾಮಚಂದ್ರಪ್ಪ, ಸುಧಾ, ಎನ್.ವಿ.ಶಿವಣ್ಣ, ಹೇಮಚಂದ್ರ, ಸದಸ್ಯರಾದ ಕಲೀಂ ಉಲ್ಲಾ, ವಿ.ಅಮರ್ ನಾಥ್, ಕೆ.ಆರ್.ಸಪ್ತಗಿರಿ, ಕೆ.ಎಂ.ಗಾಯತ್ರಿ ಬಸವರಾಜ್, ಗಿರೀಶ್, ಡಿ.ಎನ್.ವೆಂಕಟರೆಡ್ಡಿ, ಡಿ.ಜೆ.ಚಂದ್ರಮೋಹನ್, ಲಕ್ಷ್ಮಿದೇವಮ್ಮ, ಸುಬ್ಬಮ್ಮ, ಸರೋಜಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.

‘ಪ್ರಜಾವಾಣಿ’ ವರದಿ ಸದ್ದು

‘ಪ್ರಜಾವಾಣಿ’ ಪತ್ರಿಕೆಯಲ್ಲಿ ಮಾರ್ಚ್ 13ರಂದು ಪ್ರಕಟವಾಗಿದ್ದ ‘ರಾಜಕೀಯ ವೈಷಮ್ಯಕ್ಕೆ ₹7 ಲಕ್ಷ ವ್ಯರ್ಥ’ ಎಂಬ ವರದಿಯು ನಗರಸಭೆಯಲ್ಲಿ ಪ್ರತಿಧ್ವನಿಸಿತು.

ರಾಜಕೀಯ ವೈಷಮ್ಯಕ್ಕೆ ಹಣ ವ್ಯರ್ಥವಾಗುವ ವಿಚಾರ ಸಂಬಂಧ ಸದಸ್ಯೆಯರಾದ ಪದ್ಮಾವತಮ್ಮ ಮತ್ತು ಸುಬ್ಬಮ್ಮ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು.

ನಗರಸಭೆಯ ಎಲ್ಲ ವಾರ್ಡ್‌ಗಳಿಗೆ ಬಳಕೆಯಾಗಬೇಕಿದ್ದ ಅನುದಾನವನ್ನು ವ್ಯರ್ಥ ಮಾಡುವುದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.