ADVERTISEMENT

ಕಾಂಗ್ರೆಸ್‌ನಿಂದ ಬಯಲುಸೀಮೆಗೆ ಅನ್ಯಾಯ: ಸಂಸದ ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 7:45 IST
Last Updated 18 ನವೆಂಬರ್ 2025, 7:45 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಸರ್ಕಾರದಿಂದ ಬಯಲುಸೀಮೆ ಜಿಲ್ಲೆಗಳಿಗೆ ಬಹಳ ಅನ್ಯಾಯವಾಗಿದೆ. ಎತ್ತಿನಹೊಳೆ, ಎಚ್‌.ಎನ್‌ ವ್ಯಾಲಿ, ಕೆ.ಸಿ ವ್ಯಾಲಿ ಯೋಜನೆ ನೀರಿನ ಮೂರು ಹಂತದ ಶುದ್ಧೀಕರಣಕ್ಕೂ ಮುಂದಾಗಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಅಸಮಾಧಾನ ವ್ಯಕ್ತ‍ಪಡಿಸಿದರು. 

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಬಯಲುಸೀಮೆಗೆ ಬಹಳ ಅನ್ಯಾಯ ಮಾಡಿದೆ. ಬಿಜೆಪಿ ಸರ್ಕಾರ ಇದ್ದಿದ್ದರೆ ಎತ್ತಿನಹೊಳೆ ಯೋಜನೆಯಡಿ ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ಈ ವೇಳೆಗೆ ನೀರು ದೊರೆಯುತ್ತಿತ್ತು. ಈ ಸರ್ಕಾರ ಇನ್ನೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಇನ್ನೂ ಸಕಲೇಶಪುರದಲ್ಲೇ ನೀರಿದೆ ಎಂದರು.

ಭೂಸ್ವಾಧೀನವಾಗಿಲ್ಲ. ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಮುಂದಾಗಿಲ್ಲ. ನೀರಾವರಿ ಯೋಜನೆಗಳ ಹೆಸರಿನಲ್ಲಿ ಮತವನ್ನು ಪಡೆದರು. ಆದರೆ ಯಾವುದೇ ಯೋಜನೆಗಳು ಕಾರ್ಯಗತವಾಗಿಲ್ಲ ಎಂದರು.

ADVERTISEMENT

ಎಚ್‌.ಎನ್‌ ವ್ಯಾಲಿ, ಕೆ.ಸಿ ವ್ಯಾಲಿ ಮೇಲ್ದರ್ಜೆಗೇರಿಸುವ ಕಾಮಗಾರಿಯೂ ನಡೆದಿಲ್ಲ. ತಮಿಳುನಾಡಿನಲ್ಲಿ ಕಾಂಗ್ರೆಸ್‌ ಮಿತ್ರಪಕ್ಷವೇ ಅಧಿಕಾರದಲ್ಲಿದೆ. ಆದರೂ ಮೇಕೆದಾಟು ಯೋಜನೆ ಜಾರಿ ಮಾಡಲು ಸಾಧ್ಯವಾಗಿಲ್ಲ. ನಮ್ಮ ರಾಜ್ಯಕ್ಕೆ ಬರಬೇಕಾದ ಹೂಡಿಕೆಗಳು, ಯೋಜನೆಗಳು ಪಕ್ಕದ ರಾಜ್ಯಗಳಿಗೆ ಹೋಗುತ್ತಿದೆ. ನೆರೆಯ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಉದ್ಯಮ ಮೇಳ ನಡೆಸಿ ₹12 ಲಕ್ಷ ಒಪ್ಪಂದ ಮಾಡಿಕೊಂಡಿದ್ದಾರೆ. ನಮ್ಮಲ್ಲಿ ಇಂತಹ ಕೆಲಸ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ಒದಗಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಮಾತ್ರ ಪಿಎಂ ಜನೌಷಧಿ ಮಳಿಗೆಗಳನ್ನು ಮುಚ್ಚಿಸಲಾಗುತ್ತಿದೆ. ರಾಜ್ಯ ಸರ್ಕಾರ ಏಕೆ ಇಂತಹ ಅವಿವೇಕಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ತಿಳಿಯುತ್ತಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಐದು ಜನೌಷಧ ಕೇಂದ್ರಗಳನ್ನು ಮುಚ್ಚಲಾಗಿದೆ. ಬಡವರ ಬಗ್ಗೆ ಕಾಳಜಿ ಇದ್ದರೆ ಜನೌಷಧಿ ಮಳಿಗೆಗಳಿಗೆ ಪ್ರೋತ್ಸಾಹ ನೀಡಲಿ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಘನತೆಗೆ ಸೂಕ್ತವಲ್ಲ ಎಂದರು.

ಕಾಂಗ್ರೆಸ್‌ ಗೆದ್ದರೆ ಪ್ರಜಾಪ್ರಭುತ್ವ ಉಳಿಯುತ್ತದೆ, ಸೋತರೆ ಮಾತ್ರ ಮತಗಳ್ಳತನ ಆಗುತ್ತದೆ ಎಂಬ ಲಾಜಿಕ್‌ ಯಾರೂ ನಂಬುವುದಿಲ್ಲ ಎಂದು ಹೇಳಿದರು. 

Cut-off box - ‘ಹೈಟೆಕ್ ಮಾರುಕಟ್ಟೆ ದೊರೆಯುವುದಿಲ್ಲ’ ‘ಚಿಕ್ಕಬಳ್ಳಾಪುರದಲ್ಲಿ ಹೈಟೆಕ್‌ ಹೂವಿನ ಮಾರುಕಟ್ಟೆ ನಿರ್ಮಿಸಲು ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ₹ 100 ಕೋಟಿ ಬಿಡುಗಡೆ ಮಾಡಿ ಡಿಪಿಆರ್‌ ಸಿದ್ಧಪಡಿಸಿತ್ತು. ಆದರೆ ಈ ಸರ್ಕಾರದಲ್ಲಿ ಹೈಟೆಕ್‌ ಮಾರುಕಟ್ಟೆ ಸಿಗಲ್ಲ’ ಎಂದು ಡಾ.ಕೆ.ಸುಧಾಕರ್ ತಿಳಿಸಿದರು. ಈಗ ಕಾರ್ಯಸಾಧ್ಯತೆಯ ಬಗ್ಗೆ ತಿಳಿಯಲು ಡಿಪಿಆರ್ ಕರೆಯುತ್ತಿದ್ದಾರೆ. ಈ ಎಲ್ಲವನ್ನ ಗಮನಿಸಿದರೆ ಈ ಸರ್ಕಾರದಲ್ಲಿ ಹೈಟೆಕ್ ಮಾರುಕಟ್ಟೆ ನಮಗೆ ಸಿಗುವುದಿಲ್ಲ ಎಂದರು. ಹಿಂದಿನ ಬಿಜೆಪಿ ಸರ್ಕಾರ ರೈತರ ಜೊತೆ ಮಾತುಕತೆ ನಡೆಸಿ ಅವರಿಗೆ ಅನುಕೂಲವಾದ ಜಾಗ ಗುರುತಿಸಿತ್ತು. ಆದರೆ ಈಗ ಮಾರುಕಟ್ಟೆಯ ಜಾಗವನ್ನು ಇನ್ನಷ್ಟು ದೂರದಲ್ಲಿ ಗುರುತಿಸಲಾಗಿದೆ ಎಂದರು.

‘ಪ್ರತಿಭಟನೆ; ಸಮಯ ಕಡಿಮೆ ಮಾಡಿ’ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟಿಸಲು 10 ದಿನಗಳ ಮುನ್ನವೇ ಅನುಮತಿ ಪಡೆಯಬೇಕು ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು ‘ನಾನು ಪ್ರತಿಭಟಿಸಬೇಕು ಎಂದರೆ ನಮ್ಮ ಪಕ್ಷದ ಅಧ್ಯಕ್ಷರು ಸಂಬಂಧಿಸಿದ ಠಾಣೆಗೆ ಪತ್ರ ನೀಡಿ ಅನುಮತಿ ಪಡೆಯುವರು. ಪ್ರತಿಭಟನೆ ನಡೆಸಲು 10 ದಿನ ಮುಂಚಿತವಾಗಿ ಪತ್ರ ನೀಡಬೇಕು ಎನ್ನುವ ನಿಯಮವನ್ನು ಸಡಿಲಿಸಿ ಎಂದು ಜಿಲ್ಲಾಧಿಕಾರಿ ಅವರಿಗೆ ಜನರ ಪರವಾಗಿ ಮನವಿ ಮಾಡುವೆ’ ಎಂದರು. ಜಿಲ್ಲಾಧಿಕಾರಿ ಅವರು ಪ್ರತಿಭಟನೆಯ ಹಕ್ಕುಗಳನ್ನು ದಮನಿಸುತ್ತಿಲ್ಲ. ಆದರೆ 10 ದಿನಗಳ ಸಮಯವನ್ನು ಕಡಿಮೆ ಮಾಡಲಿ ಎಂದರು.

‘ಭಿನ್ನಾಭಿಪ್ರಾಯ ಸಹಜ’ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿನ ಬಿಜೆಪಿ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಡಾ.ಕೆ.ಸುಧಾಕರ್ ‘‌ರಾಜಕೀಯ ಪಕ್ಷಗಳಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಹಜ. ಅವುಗಳನ್ನು ಸರಿ ಮಾಡಿಕೊಂಡು ಮುನ್ನಡೆಯುವುದೇ ನಮ್ಮ ಮುಂದಿರುವ ಸವಾಲು ಮತ್ತು ಕೆಲಸ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.