ADVERTISEMENT

ಚಿಕ್ಕಬಳ್ಳಾಪುರದಲ್ಲಿ ಪ್ರಿಯಕರನೇ ಪ್ರಿಯತಮೆಗೆ ವಿಷ ಕುಡಿಸಿ ಕೊಲೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 13:20 IST
Last Updated 13 ಜನವರಿ 2020, 13:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗೌರಿಬಿದನೂರು: ಪ್ರಿಯತಮೆಗೆ ಪ್ರಿಯಕರನೇ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ತೊಂಡೇಬಾವಿ ‌ಹೋಬಳಿಯ‌ ಕಮಲಾಪುರದಲ್ಲಿ ನಡೆದಿದೆ.

ರಾಧಾ (17) ಮೃತ ಬಾಲಕಿ. ವೆಂಕಟೇಶ್ (23) ಕೊಲೆ ಆರೋಪಿ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಾಧಾಗೆ ಬೇರೆಯವರ ಜೊತೆ ಸಂಬಂಧ ಇದೆ ಎಂದು ವೆಂಕಟೇಶ್‌ ಅನುಮಾನಗೊಂಡಿದ್ದ. ಈ ಆರೋಪವನ್ನು ಒಪ್ಪದ ಯುವತಿ ಎಷ್ಟೇ ಸ್ಪಷ್ಟನೆನೀಡಿದರೂ ಆತ ಒಪ್ಪಲಿಲ್ಲ. ಅದನ್ನು ಸಾಬೀತು ಪಡಿಸಲು ಇಬ್ಬರೂ ವಿಷ ಕುಡಿಯೋಣ ಎಂದು ಹೇಳಿ ವೆಂಕಟೇಶ್‌ ಜನವರಿ 6ರಂದು ಯುವತಿಗೆ ವಿಷ ಕುಡಿಸಿದ್ದಾನೆ. ‘ನಾನು‌ ನಿನ್ನೊಂದಿಗೆ ವಿಷ ಸೇವಿಸುತ್ತೇನೆ’ ಎಂದು ನಾಟಕವಾಡಿದ್ದಾನೆ‌.

ವಿಷ ಸೇವಿಸಿದ ರಾಧಾ ಮನೆಗೆ ತೆರಳಿ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಪೋಷಕರು ರಾಧಾಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಯುವತಿ ಜನವರಿ 8ರಂದು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ. ಅವಳನ್ನು ನಂಬಿಸುವ ಸಲುವಾಗಿ ತಾನು‌ ವಿಷ ಸೇವಿಸಿರುವುದಾಗಿ ಪ್ರಿಯಕರ ಹೇಳಿ ಅವಳೊಂದಿಗೆ ಆಸ್ಪತ್ರೆಗೆ ದಾಖಲಾಗಿ, ಮರುದಿನ ಮನೆಗೆ ವಾಪಸಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ರಾಧಾಳ ಪೋಷಕರು ‌ನೀಡಿದ ದೂರಿನ ಮೇರೆಗೆ ಮಂಚೇನಹಳ್ಳಿ ಪೋಲೀಸರು ಕಾರ್ಯಾಚರಣೆ ನಡೆಸಿ‌ ಆರೋಪಿ ವೆಂಕಟೇಶ್‌ನನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.