ಚಿಂತಾಮಣಿ: ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ಏಪ್ರಿಲ್ 22 ರಂದು ಮನೆಗೆ ಸಿಡಿಲುಬಡಿದು ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಗೌತಮ್ (6) ಹಾಗೂ ಅವರ ತಂದೆ ಅಂಬರೀಶ್ ಭಾನುವಾರ ಮೃತಪಟ್ಟಿದ್ದಾರೆ.
ಬೆಳಿಗ್ಗೆ ಬಾಲಕ ಗೌತಮ್ ಮೃತಪಟ್ಟಿದ್ದನು. ಆತನನ್ನು ಸ್ವಗ್ರಾಮ ಸೋಮಯಾಜಲಹಳ್ಳಿಗೆ ತಂದು ಭಾನುವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆ ನಡೆಯುತ್ತಿದ್ದಂತೆ ತಂದೆ ಅಂಬರೀಶ್ (45) ಮೃತಪಟ್ಟ ಸುದ್ದಿ ತಲುಪಿದೆ. ಇನ್ನೂ ಇಬ್ಬರು ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಗುರುವಾರ ಬಿರುಗಾಳಿ, ಮಳೆ ಸಮಯದಲ್ಲಿ ಮನೆಗೆ ಸಿಡಿಲುಬಡಿದ ಒಂದೇ ಕುಟುಂಬದ 4 ಮಕ್ಕಳು ಸೇರಿ 7 ಮಂದಿ ಗಾಯಗೊಂಡಿದ್ದರು. ಗಾಯಾಳುಗಳಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಲ್ಲರಿಗೂ ಸುಟ್ಟ ಗಾಯಗಳಾಗಿದ್ದವು. ಮನೆ ಕುಸಿದುಬಿದ್ದಿತ್ತು.
ಬಡಕುಟುಂಬವಾಗಿದ್ದು, ಕುಟುಂಬದ 7 ಮಂದಿಯೂ ಚಿಕಿತ್ಸೆ ಪಡೆಯುತ್ತಿರುವುದರಿಂದ ತೀವ್ರ ಸಂಕಷ್ಟ ಸದುರಿಸುತ್ತಿದೆ. ಚಿಕಿತ್ಸೆ ಖರ್ಚಿಗೂ ಕುಟುಂಬ ಪರದಾಡುವತಾಗಿದೆ. ದಾನಿಗಳಿಂದ ಚಿಕಿತ್ಸೆಗಾಗಿ ಕುಟುಂಬ ಸಹಾಯವನ್ನು ಬೇಡುತ್ತಿದೆ. ಆಸಕ್ತಿಯುಳ್ಳವರು ಮುರುಗಮಲ್ಲ ಕೆನರಾ ಬ್ಯಾಂಕ್ ಖಾತೆ ರಾಜಪ್ಪ, ಖಾತೆ ನಂ, 1481101062590, ಐಎಫ್ಎಸ್ಸಿ ಕೋಡ್ CNRB0001481 ಹಣ ಸಂದಾಯ ಮಾಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.