ಗುಡಿಬಂಡೆ: ಜನಸಂದಣಿ ಹಾಗೂ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ತೆರಳುವ ಪಟ್ಟಣದಲ್ಲಿನ ರಾಮಪಟ್ಟಣ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.
ಪ್ರತಿದಿನ ಈ ರಸ್ತೆಯಲ್ಲಿ ಓಡಾಡುವ ಜನರು ಹಾಗೂ ವಾಹನಗಳಿಗೆ ನರಕ ದರ್ಶನವಾಗುತ್ತಿದೆ. ಈ ನಡುವೆಯೇ ಗುರುವಾರ ಸಂಜೆ ಸುರಿದ ಮಳೆಯಿಂದ ರಸ್ತೆಯಲ್ಲಿ ನೀರು ಶೇಖರಣೆಯಾಗಿದ್ದು, ಕೆರೆಯಂತಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.
ಮುಖ್ಯರಸ್ತೆಯಿಂದ ರಾಮಪಟ್ಟಣ ರಸ್ತೆವರೆಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಪದವಿ ಕಾಲೇಜು, ಗುಡಿಬಂಡೆ ಗ್ರಾಮೀಣ ಭಾಗಕ್ಕೆ ಇಂಡೇನ್ ಗ್ಯಾಸ್ ಸರಬರಾಜು ಮಾಡುವ ಕಚೇರಿ, ಉಲ್ಲೋಡು ಗ್ರಾಮ ಪಂಚಾಯಿತಿ ಕಚೇರಿ ಇದೆ. ಹತ್ತಾರು ಹಳ್ಳಿಗಳಿಂದ ಕೆಲಸ ಕಾರ್ಯಗಳಿಗೆ ಜನರು ಈ ಮಾರ್ಗ ಅವಲಂಬಿಸಿದ್ದಾರೆ. ಹಲವಾರು ಬಾರಿ ರಸ್ತೆ ದುರಸ್ತಿ ಮಾಡುವಂತೆ ಪಟ್ಟಣ ಪಂಚಾಯಿತಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾರೊಬ್ಬರು ಕ್ರಮವಹಿಸಿಲ್ಲ.
‘ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ವಿಚಾರಣೆ ಮಾಡಿದರೆ ಈ ರಸ್ತೆ ನಮ್ಮ ವ್ಯಾಪ್ತಿಗೆ ಸೇರಿಲ್ಲ. ಲೋಕೋಪಯೋಗಿ ಇಲಾಖೆಯ ರಸ್ತೆಯಾಗಿದೆ ಎನ್ನುತ್ತಾರೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ವಿದ್ಯಾರ್ಥಿಗಳಾದ ಮಂಜು, ನಂದಕುಮಾರ್ ತಿಳಿಸಿದರು.
ಪಟ್ಟಣದ 11 ವಾರ್ಡ್ಗಳಲ್ಲಿ ನಡೆದಿರುವ ರಸ್ತೆ, ಚರಂಡಿ ಕಾಮಗಾರಿ ಕಳಪೆಯಿಂದ ಕೂಡಿದೆ. ರಸ್ತೆಗಳು ಒಂದೇ ವರ್ಷದಲ್ಲಿ ಹಾಳಾಗುತ್ತವೆ. ಈ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳಿಗೆ ತಿಳಿಸಿದರೂ ಗಮನಹರಿಸಿಲ್ಲ ಎಂಬುದು ಜನರ ದೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.