ಚಿಕ್ಕಬಳ್ಳಾಪುರ: ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ) ಕಚೇರಿಯ ಸಹಾಯಕ ಆಡಳಿತಾಧಿಕಾರಿ ಎನ್.ರಾಮಕೃಷ್ಣನ್ ಅವರು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಹೆಸರು ಉಲ್ಲೇಖಿಸಿ ವೈದ್ಯರೊಬ್ಬರಿಗೆ ಹಣ ನೀಡುವಂತೆ ಸೂಚಿಸಿದ ಮೊಬೈಲ್ ಸಂಭಾಷಣೆ ಆಡಿಯೊ ಮಂಗಳವಾರ ಬೆಳಕಿಗೆ ಬಂದಿದೆ.
ರಾಮಕೃಷ್ಣನ್ ಮತ್ತು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರ ನಡುವೆ ನಡೆದಿದೆ ಎನ್ನಲಾದ 2 ಮತ್ತು 1.13 ನಿಮಿಷಗಳ ಎರಡು ಆಡಿಯೊ ಸಂಭಾಷಣೆಗಳಲ್ಲಿ ರಾಮಕೃಷ್ಣನ್ ಅವರು, ‘ಶ್ರೀರಾಮುಲು ಮದುವೆ ಮುಗಿಸಿಕೊಂಡುಮತ್ತೆ ಆಫೀಸಿಗೆ ಬಂದಿದ್ದಾರಂತೆ, ಡಿಎಚ್ಒ ಅವರು ನಿಮ್ಮ ಕಚೇರಿಯಿಂದ ₹50 ಕೊಡಿಸುವಂತೆ ತಿಳಿಸಿದ್ದಾರೆ’ ಎನ್ನುವುದರೊಂದಿಗೆ ಸಂಭಾಷಣೆ ಆರಂಭವಾಗುತ್ತದೆ.
ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಸಚಿವ ಶ್ರೀರಾಮುಲು ಅವರು, ‘ಚಿಕ್ಕಬಳ್ಳಾಪುರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಎನ್.ರಾಮಕೃಷ್ಣನ್ ಅವರು ವೈದ್ಯರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಕುರಿತು ಮಾಧ್ಯಮವೊಂದರಲ್ಲಿ ವರದಿ ಬಂದಿರುವುದು ಗಮನಕ್ಕೆ ಬಂದಿದೆ.
ಈ ಬಗ್ಗೆ ಸಂಬಂಧಿಸಿದ ಮಾಧ್ಯಮ ವರದಿ ಆಡಿಯೊ ರೆಕಾರ್ಡಿಂಗ್ ಹಾಗೂ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಶಿಸ್ತುಕ್ರಮ ಕೈಗೊಳ್ಳಲು ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಈ ರೀತಿಯ ಚಟುವಟಿಕೆಗಳನ್ನು ಸಹಿಲು ಸಾಧ್ಯವಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ’ ಎಂದು ಟ್ವಿಟ್ ಮಾಡಿದ್ದಾರೆ.
ಅದರ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಇಂದಿರಾ.ಆರ್ ಕಬಾಡೆ ಅವರ ರಾಮಕೃಷ್ಣನ್ ಅವರನ್ನು ಅಮಾನತುಗೊಳಿಸುವಂತೆ ಕೋರಿ ಆರೋಗ್ಯ ಇಲಾಖೆ ಆಯುಕ್ತರಿಗೆ ಅಮಾನತುಗೊಳಿಸುವಂತೆ ಕೋರಿ ಪತ್ರ ಬರೆದಿದ್ದಾರೆ. ರಾಮಕೃಷ್ಣನ್ ಅವರು ಸೋಮವಾರದಿಂದಲೇ 10 ದಿನಗಳ ರಜೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಇಂದಿರಾ ಅವರನ್ನು ವಿಚಾರಿಸಿದರೆ, ‘ನಾನು ಒಂದು ತಿಂಗಳ ಹಿಂದಷ್ಟೇ ಇಲ್ಲಿ ಕರ್ತವ್ಯಕ್ಕೆ ಹಾಜರಾಗಿರುವೆ. ರಾಮಕೃಷ್ಣನ್ ಅವರು ವೈದ್ಯರೊಬ್ಬರ ಬಳಿ ಹಣಕ್ಕೆ ಬೇಡಿಕೆ ಇಟ್ಟ ವಿಚಾರ ನನಗೂ ಮಾಧ್ಯಮಗಳ ಮೂಲಕವೇ ತಿಳಿದಿದೆ. ರಾಮಕೃಷ್ಣನ್ ಅವರಿಗೆ ನೋಟಿಸ್ ಜಾರಿ ಮಾಡುವ ಜತೆಗೆ ಅಮಾನತಿಗೆ ಶಿಫಾರಸು ಮಾಡಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.