ADVERTISEMENT

ಸುಳ್ಳು ನಂಬಿ ಮೋಸ ಹೋಗಬೇಡಿ

ಅಗಲಗುರ್ಕಿಯಲ್ಲಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಡಿ.ಆರ್.ನಾರಾಯಣಸ್ವಾಮಿ ಮತ ಯಾಚನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 15:50 IST
Last Updated 3 ಡಿಸೆಂಬರ್ 2019, 15:50 IST
ಅಗಲಗುರ್ಕಿಯಲ್ಲಿ ಬಿಎಸ್ಪಿ ಅಭ್ಯರ್ಥಿ ಡಿ.ಆರ್.ನಾರಾಯಣಸ್ವಾಮಿ ಮತ ಯಾಚನೆ ಮಾಡಿದರು.
ಅಗಲಗುರ್ಕಿಯಲ್ಲಿ ಬಿಎಸ್ಪಿ ಅಭ್ಯರ್ಥಿ ಡಿ.ಆರ್.ನಾರಾಯಣಸ್ವಾಮಿ ಮತ ಯಾಚನೆ ಮಾಡಿದರು.   

ಚಿಕ್ಕಬಳ್ಳಾಪುರ: ‘ಕಳೆದ ಆರು ವರ್ಷಗಳಿಂದ ಒಬ್ಬೇ ಒಬ್ಬ ರೈತನಿಗೆ ಸಾಗುವಳಿ ಚೀಟಿ ನೀಡದ ಸುಧಾಕರ್ ಅವರು ನಗರ ನಿವಾಸಿಗಳಿಗೆ ನಿವೇಶನ ಕೊಡುತ್ತಾರಾ? ಅವರು ಹೇಳುವುದೆಲ್ಲ ಬರೀ ಸುಳ್ಳು ಭರವಸೆಗಳು. ಮತದಾರರು ಸುಳ್ಳನ್ನು ನಂಬಿ ಮೋಸ ಹೋಗಬೇಡಿ’ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಭ್ಯರ್ಥಿ ಡಿ.ಆರ್.ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ಅಗಲಗುರ್ಕಿಯಲ್ಲಿ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಜೆಡಿಎಸ್, ಬಿಜೆಪಿಯ ಸುಳ್ಳು ಭರವಸೆಗಳಿಗೆ ಮತದಾರರು ಮೋಸ ಹೋಗಬೇಡಿ. ಈ ಬಾರಿ ನನ್ನ ಗೆಲುವು ಖಚಿತ. ಸಂವಿಧಾನದಿಂದಾಗಿ ಹಕ್ಕು ಮತ್ತು ಅಧಿಕಾರ ಪಡೆದುಕೊಂಡಿರುವ ಬಹುಸಂಖ್ಯಾತರು ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸುವ ಸಂದರ್ಭ ಬಂದಿದೆ ಎಲ್ಲಾ ಮತದಾರರು ವಿವೇಚನೆಯಿಂದ ಮತದಾನ ಮಾಡಬೇಕು. ಬಿಎಸ್ಪಿ ಅಧಿಕಾರಕ್ಕೆ ಬಂದರೆ ಕೃಷಿ, ಕೈಗಾರಿಕೆ, ಬೆಳವಣಿಗೆಗೆ ಶ್ರಮಿಸಲಿದೆ. ಸ್ಥಳಿಯ ಸಮಸ್ಯೆಗಳಾದ ನೀರು, ಉದ್ಯೋಗ ಒದಗಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರಾದವರು ಸದಾ ಜನರ ಜತೆ ಇರಬೇಕು. ಆದರೆ ಇಲ್ಲಿ ಗೆದ್ದ ಶಾಸಕರು ಜನರಿಗಿಂತಲೂ ಐಶಾರಾಮಿ ಹೋಟೆಲ್‌ನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ನೀವು ಸುಧಾಕರ್ ಅವರು ನಂಬಿ ಈ ಹಿಂದೆ ಮತ ನೀಡಿದರೆ, ಅವರು ನಿಮ್ಮ ಮತಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. ಸುಧಾಕರ್ ಶ್ರೀಮಂತರ ಸೇವೆ ಮಾಡುತ್ತಾರೆ ಹೊರತು ಬಡವರ ಸೇವೆ ಮಾಡುವುದಿಲ್ಲ. ನಾನು ನಿಮ್ಮನ್ನು ನಂಬಿ ಬಂದಿದ್ದೇನೆ. ನನ್ನನ್ನು ನೀವು ಈಗ ಉಳಿಸಿಕೊಳ್ಳಿ ನಾನು ನಿಮ್ಮನ್ನು ಉಳಿಸುತ್ತೇನೆ. ಸದಾ ನಿಮ್ಮ ಸೇವೆಗೆ ಬದ್ಧನಾಗಿರುತ್ತೇನೆ’ ಎಂದು ತಿಳಿಸಿದರು.

ADVERTISEMENT

‘ಮೂರು ಪಕ್ಷಗಳೂ ಇವತ್ತು ಬರೀ ಸ್ವಾರ್ಥ ರಾಜಕೀಯ ಮಾಡುತ್ತಿವೆ. ದೇಶದ ಬದಲಾವಣೆಗಾಗಿ ಮತ್ತು ಭ್ರಷ್ಟ ರಾಜಕಾರಣಿಗಳಿಗೆ ಬುದ್ಧಿ ಕಲಿಸಬೇಕಾಗಿದೆ ಆದ್ದರಿಂದ ಬಿಎಸ್ಪಿ ಬೆಂಬಲಿಸಿ. ಸುಧಾಕರ್ ಒಬ್ಬ ಮಹಾನ್ ಸುಳ್ಳುಗಾರ. ಅವರ ಸುಳ್ಳು ಮಾತಿಗೆ ಜನ ಮರುಗಳಾಗಬೇಡಿ ಸುಳ್ಳು ಹೇಳುವವರಿಗೆ, ಮೋಸ ಮಾಡುವ ಕಾಂಗ್ರೆಸ್‌ಗೆ ಮತ ನೀಡಬೇಡಿ. ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಇದನ್ನು ತಿರಸ್ಕರಿಸಿ. ಸಮಾನತೆಗಾಗಿ ಶ್ರಮಿಸುತ್ತಿರುವ ಬಿಎಸ್ಪಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಬಿಎಸ್ಪಿ ರಾಜ್ಯ ಘಟಕದ ಉಸ್ತುವಾರಿಗಳಾದ ಮಾರಸಂದ್ರ ಮುನಿಯಪ್ಪ, ದಿನೇಶ್ ಗೌತಮ್, ರಮೇಶ್ ಭಾರತಿ ಕರ್ದಂ, ಉಪಾಧ್ಯಕ್ಷ ಕೆ.ಬಿ.ವಾಸು, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ವಿ.ನಾಗಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಅಪ್ಸರ್ ಪಾಷಾ, ಉಪಾಧ್ಯಕ್ಷರಾದ ಬಾಗೇಪಲ್ಲಿ ವೆಂಕಟೆಶ್, ದೇವಪ್ಪ, ಜಿಲ್ಲಾ ಸಂಯೋಜಕ ಎಂ.ಮುನಿಕೃಷ್ಣಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಅಧ್ಯಕ್ಷ ಎಂ ಮುನಿಕೃಷ್ಣಪ್ಪ, ನಂದಿಗುಂದ ವೆಂಟೇಶ್, ಕಾರ್ಯದರ್ಶಿ ಕೆ.ಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.