ಚಿಕ್ಕಬಳ್ಳಾಪುರ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿಪರಿಶಿಷ್ಟರ ಸ್ವಾತಂತ್ರ್ಯ ಹೋರಾಟದ ವಿಚಾರಗಳು ದಾಖಲಾಗಲೇ ಇಲ್ಲ ಎಂದು ಚಿಂತಕ ಶಿವಸುಂದರ್ ತಿಳಿಸಿದರು.
ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ಚಿಂತಕರ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್ 204ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೀಮಾ ಕೋರೆಗಾಂವ್ ವಿಜಯೋತ್ಸವ ದಲಿತರ ಪ್ರತಿರೋಧದ ಸಂಕೇತ. ವಿಜಯೋತ್ಸವ ನಾವೆಲ್ಲರೂ ಸ್ಮರಿಸಿಕೊಳ್ಳುವ ಮೂಲಕ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಒಂದು ಕಡೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ನಡೆಯಿತು. ಮತ್ತೊಂದು ಕಡೆ ಈ ದೇಶದ ಪರಿಶಿಷ್ಟರು, ದಮನಿತರ ಹೋರಾಟಗಳು ಸಹ ಸ್ವಾತಂತ್ರ್ಯ ಚಳವಳಿಯ ಭಾಗಗಳೇ ಆಗಿದ್ದವು. ಆದರೆ ಅವು ದಾಖಲೆ ಆಗಲೇ ಇಲ್ಲ. ಪೊದೆಗಳಲ್ಲಿ ಅವಿತಿದ್ದಭೀಮಾ ಕೋರೆಗಾಂವ್ ಹೋರಾಟದ ನೆನಪುಗಳನ್ನು 1921ರಲ್ಲಿ ಅಂಬೇಡ್ಕರ್ ಅನಾವರಣಗೊಳಿಸಿದರು ಎಂದು ಸ್ಮರಿಸಿದರು.
ಉಪ್ಪಿಗಾಗಿ ದಂಡಿ ಸತ್ಯಾಗ್ರಹ ನಡೆಯಿತು. ಅದೇ ರೀತಿ ನೀರಿಗಾಗಿ ಅಂಬೇಡ್ಕರ್ ನೇತೃತ್ವದಲ್ಲಿ ಮಹಾಡ್ ಹೋರಾಟ ನಡೆಯಿತು. ಆದರೆ ಅದು ನಮ್ಮ ಸ್ವಾತಂತ್ರ್ಯದ ಹೋರಾಟದಲ್ಲಿ ದಾಖಲಾಗಲಿಲ್ಲ. 1876ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಷ್ಟೇಭೀಮಾ ಕೋರೆಗಾಂವ್ ಹೋರಾಟವೂ ಮುಖ್ಯವಾದುದು ಎಂದು ಹೇಳಿದರು.
ಪೇಶ್ವೆಗಳ ಆಡಳಿತದಲ್ಲಿ ಅಸ್ಪೃಶ್ಯತೆ ಎದುರು ಸೆಟೆದು ನಿಂತು ಮಾನವೀಯ ಮೌಲ್ಯಗಳಿಗಾಗಿ ಮಹರ್ ಸೈನಿಕರು ಕೆಚ್ಚೆದೆಯಿಂದ ಹೋರಾಟ ಮಾಡಿದರು ಎಂದು ಸ್ಮರಿಸಿದರು.
ಜಚನಿ ಕಾಲೇಜಿನ ಆಡಳಿತಾಧಿಕಾರಿ ಶಿವಜ್ಯೋತಿ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿ ವಿಭಾಗದಲ್ಲಿ ಹೋರಾಟದ ಅಗತ್ಯವಿದೆ. ಮಹಿಳೆಯರು ಉನ್ನತ ಶಿಕ್ಷಣ ಪಡೆಯುವ ಮೂಲಕ ಅರಿವು ಪಡೆಯಬೇಕು. ಅಂದಿನ ಹೋರಾಟ ಇಂದಿಗೂ ಜೀವಂತವಾಗಿದೆ. ಅಂದು ಪರಿಶಿಷ್ಟ ಸಮುದಾಯಸ್ವಾಭಿಮಾನಕ್ಕೆ ಧಕ್ಕೆ ಆಯಿತು. ಅದನ್ನು ಉಳಿಸಲು ಹೋರಾಟ ಮಾಡಿದರು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೊಡಿರಂಗಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ. ರಾಜಾಕಾಂತ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಜಿ, ಮುಖಂಡರಾದ ಸುಧಾ ವೆಂಕಟೇಶ್, ಎ.ಟಿ.ಕೃಷ್ಣನ್, ಗಾ.ನ. ಅಶ್ವತ್ಥ್, ನರಸಿಂಹಮೂರ್ತಿ, ಬಾಲಕೃಷ್ಣ, ನಾರಾಯಣಸ್ವಾಮಿ ಟಿ.ಜಿ.ಗಂಗಾಧರ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.