ADVERTISEMENT

ಚಿಕ್ಕಬಳ್ಳಾಪುರ: ಸಂಭ್ರಮದ ರಕ್ಷಾಬಂಧನ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 10:46 IST
Last Updated 3 ಆಗಸ್ಟ್ 2020, 10:46 IST
ಬಾಗೇಪಲ್ಲಿಯ ಕುಂಬಾರಪೇಟೆಯ ಜಿ.ಸಿ ಶ್ರೇಯಾ ಸಹೋದರ ವಿಶ್ವಾಸ್‌ನಿಗೆ ರಾಖಿ ಕಟ್ಟಿದರು.
ಬಾಗೇಪಲ್ಲಿಯ ಕುಂಬಾರಪೇಟೆಯ ಜಿ.ಸಿ ಶ್ರೇಯಾ ಸಹೋದರ ವಿಶ್ವಾಸ್‌ನಿಗೆ ರಾಖಿ ಕಟ್ಟಿದರು.   

ಚಿಕ್ಕಬಳ್ಳಾಪುರ: ಭ್ರಾತೃತ್ವ ಪ್ರೇಮ ಉಜ್ವಲಗೊಳಿಸುವ ‘ರಕ್ಷಾಬಂಧನ’ ಹಬ್ಬವನ್ನು ಸೋಮವಾರ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಹೆಣ್ಣು ಮಕ್ಕಳು ಮನೆಯಲ್ಲಿ ತಮ್ಮ ಸಹೋದರರಿಗೆ ರಾಖಿ ಕಟ್ಟಿ, ತಿಲಕವನ್ನಿಟ್ಟು, ಆರತಿ ಬೆಳಗಿ ಸಿಹಿ ತಿನ್ನಿಸುವ ಮೂಲಕ ಹಬ್ಬ ಆಚರಿಸಿದರು. ರಾಖಿ ಕಟ್ಟಿಸಿಕೊಂಡವರು ತಮ್ಮ ಸಹೋದರಿಯರಿಗೆ ಬಗೆ ಬಗೆಯ ಉಡುಗೊರೆಗಳನ್ನು ನೀಡಿದರು.

ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿಯರು ಸಡಗರದಿಂದ ಭಾತೃತ್ವದ ಹಬ್ಬವನ್ನು ಆಚರಿಸಿದರು.

ADVERTISEMENT

ಕೋವಿಡ್‌ ಕಾರಣಕ್ಕೆ ಸಹೋದರರನ್ನು ಭೇಟಿಯಾಗಿ ರಾಖಿ ಕಟ್ಟಲಾಗದ ಸಹೋದರಿಯರು ವಾಟ್ಸ್‌ ಆ್ಯಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬದ ಶುಭ ಕೋರಿದರು.

ಇನ್ನು ಕೆಲವರು ಅಂಚೆ, ಕೋರಿಯರ್ ಮೂಲಕ ತವರು ಮನೆಗೆ ರಾಖಿಗಳನ್ನು ಕಳುಹಿಸಿಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಅನೇಕರು ಸಹೋದರಿಯರಿಗೆ ಆನ್‌ಲೈನ್ ಮೂಲಕ ಉಡುಗೊರೆ ಕಳುಹಿಸಿದರು.

ನಗರದ ಮಾರುಕಟ್ಟೆಯಲ್ಲಿ ವೈವಿಧ್ಯಮಯ ವಿನ್ಯಾಸ, ಆಕಾರಗಳ ರಾಖಿಗಳ ಮಾರಾಟ ಕಂಡುಬಂತು. ನೂಲು, ಉಣ್ಣೆ ಗುಚ್ಛದ ಸಾದಾ ರಾಖಿಗಳ ಜತೆಗೆ ಕಸೂತಿ, ಮಣಿ, ಥರ್ಮಾಕೋಲ್‌ಗಳಿಂದ ಅಲಂಕರಿಸಿರುವ ಥರಾವರಿ ರಾಖಿಗಳನ್ನು ಅಂಗಡಿಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ರಾಖಿಗಳ ಜತೆಯಲ್ಲಿಯೇ ತಂಗಿಗೆ ಅಣ್ಣ ನೀಡಲು ಬೇಕಿರುವ ಅನೇಕ ಉಡುಗೊರೆಗಳ ವ್ಯಾಪಾರ ಕೂಡ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.