ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಸೋಂಕು ಹರಡುವುದು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆ ಮತ್ತು ಪೊಲೀಸ್ ಇಲಾಖೆ ನಗರದಲ್ಲಿ ಸಾಮಾಜಿಕ ಅಂತರಕ್ಕೆ ಒತ್ತು ನೀಡುವ ಜತೆಗೆ ಈ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸುತ್ತಿವೆ.
ಕರ್ಪ್ಯೂ ಮಾದರಿಯ ನಿರ್ಬಂಧ ಹೇರಿರುವ ಮೂರು ವಾರಗಳ ಲಾಕ್ಡೌನ್ನಿಂದಾಗಿ ನಗರದ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡಿದ್ದು, ಬಾಗಿಲು ತೆರೆದಿರುವ ಜೀವನಾವಶ್ಯಕ ವಸ್ತುಗಳ ಮಳಿಗೆಗಳ ಎದುರು ಇದೀಗ ಬಿಳಿ ಬಣ್ಣದ ವೃತ್ತ, ಚೌಕಗಳು ಗೋಚರಿಸುತ್ತಿವೆ.
ಕೊರೊನಾ ಅಪಾಯಕಾರಿ ಸಾಂಕ್ರಾಮಿಕ ಸೋಂಕು ಆಗಿರುವ ಕಾರಣ ಜನರಿಗೆ ಆರೋಗ್ಯ ಇಲಾಖೆ ವ್ಯಕ್ತಿಯಿಂದ ವ್ಯಕ್ತಿಯ ನಡುವೆ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ. ಹೀಗಾಗಿ, ನಗರದ ಮಳಿಗೆಗಳ ಎದುರು ಗ್ರಾಹಕರು ಅಂತರ ಕಾಯ್ದುಕೊಂಡು ನಿಂತು ಖರೀದಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ.
ಸಾಕಷ್ಟು ಗ್ರಾಹಕರಿಗೆ ಈ ಬಗ್ಗೆ ಅರಿವಿಲ್ಲದೆ ನೇರವಾಗಿ ಮಳಿಗೆಗಳಿಗೆ ಹೋಗುತ್ತಿದ್ದು, ಅಂತಹವರಿಗೆ ವರ್ತಕರು ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಿ, ಅಂತರ ಕಾಯ್ದುಕೊಂಡು ಸರದಿಯಂತೆ ಖರೀದಿಸುವಂತೆ ಸೂಚನೆ ನೀಡುತ್ತಿದ್ದ ದೃಶ್ಯಗಳು ಗೋಚರಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.